ಆರ್ ಬಿಐನಿಂದ 30 ಸಾವಿರ ಕೋಟಿ ರೂ. ಮಧ್ಯಂತರ ಲಾಭಾಂಶ ಪಡೆಯಲು ಮುಂದಾದ ಕೇಂದ್ರ ಸರಕಾರ: ವರದಿ

ಹೊಸದಿಲ್ಲಿ, ಸೆ.29: ಪ್ರಸಕ್ತ ಹಣಕಾಸು ವರ್ಷದ ವಿತ್ತೀಯ ಕೊರತೆ ಪ್ರಮಾಣವನ್ನು 3.3ರಲ್ಲೇ ಸೀಮಿತಗೊಳಿಸುವ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ 30 ಸಾವಿರ ಕೋಟಿ ರೂಪಾಯಿ ಮಧ್ಯಂತರ ಲಾಭಾಂಶವನ್ನು ನೀಡಬೇಕು ಎಂದು ಕೇಂದ್ರ ಸರ್ಕಾರ ಕೋರಲಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಆದಾಯ ಸಂಗ್ರಹ ವ್ಯವಸ್ಥೆಯ ಆಧುನೀಕರಣದಿಂದಾಗಿ ಸರ್ಕಾರ ಹಣಕಾಸು ಒತ್ತಡವನ್ನು ಎದುರಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿದರ ಶೇಕಡ 5ಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಅದನ್ನು ಮೇಲೆತ್ತಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಅಗತ್ಯ ಬಿದ್ದಲ್ಲಿ ಸರ್ಕಾರ ಆರ್ ಬಿಐಗೆ ಮನವಿ ಸಲ್ಲಿಸಿ ಮಧ್ಯಂತರ ಲಾಭಾಂಶವಾಗಿ 25 ಸಾವಿರ ಕೋಟಿಯಿಂದ 30 ಸಾವಿರ ಕೋಟಿ ರೂಪಾಯಿಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಪಡೆಯಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಈ ಕುರಿಯ ಮೌಲ್ಯಮಾಪನವನ್ನು ಕಳೆದ ಜನವರಿಯಲ್ಲೇ ಮಾಡಲಾಗಿದೆ ಎಂಧು ಅವರು ಸ್ಪಷ್ಟಪಡಿಸಿದ್ದಾರೆ.
ಆರ್ ಬಿಐ ಡಿವಿಡೆಂಡ್ ಹೊರತಾಗಿ, ಬಂಡವಾಳ ಹಿಂತೆಗೆದ ಮತ್ತು ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯ ಅಧಿಕ ಬಳಕೆಯಂಥ ಕ್ರಮಕ್ಕೂ ಸರ್ಕಾರ ಮುಂದಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ 28 ಸಾವಿರ ಕೋಟಿ ರೂಪಾಯಿ ಮಧ್ಯಂತರ ಲಾಭಾಂಶವನ್ನು ಆರ್ ಬಿಐ ನೀಡಿತ್ತು.