ಅಯೋಧ್ಯೆ ಕುರಿತ ಎಎಸ್ಐ ವರದಿ ತಜ್ಞರಿಂದ ಸಿದ್ಧಪಡಿಸಲಾಗಿದೆ: ಸರ್ವೋಚ್ಚ ನ್ಯಾಯಾಲಯ

ಹೊಸದಿಲ್ಲಿ,ಸೆ.29: ರಾಮ ಜನ್ಮಭೂಮಿ-ಬಾಬರಿ ಮಸೀದಿ ಜಮೀನಿನಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆ 2003ರಲ್ಲಿ ಸಲ್ಲಿಸಿದ ವರದಿಯನ್ನು ನುರಿತ ತಜ್ಞರು ಅಧ್ಯಯನ ನಡೆಸಿ ಸಿದ್ಧಪಡಿಸಿದ್ದು, ಅದನ್ನು ಮುಸ್ಲಿಂ ಪ್ರತಿವಾದಿಗಳು ಕೇವಲ ಅಭಿಪ್ರಾಯ ಎಂದು ತಳ್ಳಿಹಾಕುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ತಿಳಿಸಿದೆ.
ವಿವಾದಿತ ಪ್ರದೇಶದಲ್ಲಿ ನಡೆಸಿದ ಉತ್ಖನನದ ಆಧಾರದಲ್ಲಿ ವರದಿಯನ್ನು ಸಿದ್ಧಪಡಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ನಿರ್ದೇಶನದಂತೆ ಪುರಾತತ್ವಶಾಸ್ತ್ರಜ್ಞರು ಈ ವರದಿಯನ್ನು ಸಿದ್ಧಪಡಿಸಿದ್ದಾರೆ ಎಂದು ಅಯೋಧ್ಯೆ ಜಮೀನು ಹಕ್ಕು ವಿವಾದದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಐದು ಸದಸ್ಯರ ಪೀಠ ತಿಳಿಸಿದೆ.
ಎಎಸ್ಐಯ ವರದಿ ಅಸಂಗತತೆಯಿಂದ ಕೂಡಿದ್ದು ದುರ್ಬಲವಾಗಿದೆ ಎಂದು ಮುಸ್ಲಿಮ್ ವಾದಿಗಳು ನಿರಂತರ ವಾದ ನಡೆಸಿದ ಹಿನ್ನೆಲೆಯಲ್ಲಿ ಶ್ರೇಷ್ಟ ನ್ಯಾಯಾಲಯ ಈ ಹೇಳಿಕೆ ನೀಡಿದೆ. ನೀವು ಎಎಸ್ಐ ಆಯುಕ್ತರ ವರದಿಯನ್ನು ಇತರ ಸಾಮಾನ್ಯ ಅಭಿಪ್ರಾಯದೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರು ನ್ಯಾಯಾಧೀಶರ ಆದೇಶದಂತೆ ವಿವಾದಿತ ಸ್ಥಳದಲ್ಲಿ ಉತ್ಖನನ ನಡೆಸಿದ್ದಾರೆ. ಅದು ಕೇವಲ ಒಂದು ಅಭಿಪ್ರಾಯವಲ್ಲ ಎಂದು ನ್ಯಾಯಾಧೀಶ ಎಸ್.ಎ ನಝೀರ್ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ ಅವರಿಗೆ ತಿಳಿಸಿದ್ದಾರೆ.
ನ್ಯಾಯಾಧೀಶ ನಝೀರ್ ಅವರ ಹೇಳಿಕೆಯನ್ನು ನ್ಯಾಯಾಧೀಶರಾದ ಎಸ್.ಎ ಬೊಬ್ಡೆ ಮತ್ತು ಡಿ.ವೈ ಚಂದ್ರಚೂಡ್ ಅವರೂ ಬೆಂಬಲಿಸಿದ್ದಾರೆ.