ರ್ಯಾಲಿಗೆ ಬ್ಯಾಡಗೊಟ್ಟ, ಬಸವನಹಳ್ಳಿ ನಿವಾಸಿಗಳ ಬಳಕೆ ಬೇಡ: ಆದಿವಾಸಿ ಮುಖಂಡರ ಎಚ್ಚರಿಕೆ

ಮಡಿಕೇರಿ, ಸೆ.29: ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ದಿಡ್ಡಳ್ಳಿಯ ನಿರಾಶ್ರಿತ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವುದರೊಂದಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಕೆಲವು ಸಂಘಟನೆಗಳು ಇಲ್ಲಿನ ಗಿರಿಜನರನ್ನು ಬಳಸಿಕೊಂಡು ಮತ್ತೆ ನಿವೇಶನದ ಬೇಡಿಕೆಯನ್ನು ಮುಂದಿರಿಸಿ ಹೋರಾಟಕ್ಕಿಳಿಯುವ ಪ್ರಯತ್ನ ಮಾಡುತ್ತಿವೆ ಎಂದು ದಿಡ್ಡಳ್ಳಿ ಗಿರಿಜನ ಹೋರಾಟಗಾರ್ತಿ ಪಿ.ಎಸ್.ಮುತ್ತಮ್ಮ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ನೇ ಸಾಲಿನಲ್ಲಿ ಆದಿವಾಸಿ ಬುಡಕಟ್ಟು ಸಮೂಹಗಳಾದ ಜೇನುಕುರುಬ, ಯರವ, ಸೋಲಿಗ, ಕುಡಿಯ ಸೇರಿದಂತೆ ವಿವಿಧ ಆದಿವಾಸಿ ಬುಡಕಟ್ಟು ಸಮುದಾಯಗಳನ್ನು ಸಂಘಟಿಸಿ ರೂಪಿಸಿದ ಹೋರಾಟದ ಫಲವಾಗಿ ಪುನರ್ವಸತಿಯನ್ನು ಸರಕಾರ ಕಲ್ಪಿಸಿದೆ. ಆದರೆ ಇದೀಗ ಆದಿವಾಸಿ ನಾಯಕರೆನಿಸಿಕೊಂಡಿರುವ ಕೆಲವರು ಕನಿಷ್ಠ ಮಾಹಿತಿಯನ್ನೂ ನೀಡದೆ, ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯ ಆದಿವಾಸಿಗಳನ್ನು ಸೇರಿಸಿಕೊಂಡು ಅ.1 ರಂದು ಪ್ರತಿಭಟನಾ ರ್ಯಾಲಿ ನಡೆಸಲು ಮಂದಾಗಿದ್ದಾರೆ. ಬ್ಯಾಡಗೊಟ್ಟದಿಂದ ಕುಶಾಲನಗರದವರೆಗೆ ಜಾಥಾ ನಡೆಸಲು ತಯಾರಿ ನಡೆಸಿರುವ ಈ ಹೋರಾಟಗಾರರಿಗೆ ಇಲ್ಲಿನ ಆದಿವಾಸಿಗಳನ್ನು ಬಿಟ್ಟರೆ ಜಿಲ್ಲೆಯ ಇತರೆಡೆಗಳಲ್ಲಿ ಸಂಕಷ್ಟದಲ್ಲಿರುವ ಆದಿವಾಸಿಗಳು ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಿದರು.
ಪ್ರಸಕ್ತ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ಆದಿವಾಸಿ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ, ಕುಡಿಯುವ ನೀರು, ರಸ್ತೆ ಮೊದಲಾದ ವ್ಯವಸ್ಥೆಗಳನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಮುತುವರ್ಜಿ ವಹಿಸಿ ಮಾಡಿಕೊಡುತ್ತಿದೆ. ಇಂತಹ ಸಂದರ್ಭಲ್ಲೇ ಇಲ್ಲಿನ ಮುಗ್ಧ ಆದಿವಾಸಿಗಳನ್ನು ಬಳಸಿಕೊಂಡು ಹೋರಾಟಗಳನ್ನು ನಡೆಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವುದು ಖಂಡನೀಯವೆಂದು ಮುತ್ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ಬಸವಳಿದಿದ್ದಾರೆ. ಇವರಿಗೆ ಸೂರುಕೊಡಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ನಡೆಸಿದಲ್ಲಿ ತಮ್ಮ ಆಕ್ಷೇಪವೇನೂ ಇಲ್ಲ. ಇದನ್ನು ಬಿಟ್ಟು ಪುನರ್ವಸತಿಗೊಂಡ ಆದಿವಾಸಿಗಳನ್ನು ಬಳಸಿ ಪ್ರತಿಭಟನೆಗಳನ್ನು ಆಯೋಜಿಸುವುದು ಸರಿಯಾದ ಕ್ರಮವಲ್ಲವೆಂದು ತಿಳಿಸಿದರು.
ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯ ಆದಿವಾಸಿಗಳಿಗೆ ಈಗಾಗಲೆ ಹಕ್ಕುಪತ್ರ ನೀಡಲಾಗಿದ್ದು, ಆರ್ಟಿಸಿ ದೊರಕಬೇಕಾಗಿದೆಯಷ್ಟೇ ಎಂದು ಮುತ್ತಮ್ಮ ಸ್ಪಷ್ಟ ಪಡಿಸಿದರು.
ಆದಿವಾಸಿ ನಾಯಕ ಬಸವನಹಳ್ಳಿಯ ಸ್ವಾಮಿಯಪ್ಪ ಮಾತನಾಡಿ, ಪ್ರಸ್ತುತ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯ ಗಿರಿಜನರ ಬದಲಾಗಿ, ಜಿಲ್ಲೆಯ ವಿವಿಧೆಡೆಗಳಲ್ಲಿ ಇಂದಿಗೂ ಬಾಡಿಗೆ ಮನೆಗಳಲ್ಲಿ, ಲೈನ್ ಮನೆಗಳಲ್ಲಿರುವ ಗಿರಿಜನ ಸಮೂಹಕ್ಕೆ, ಬಡವರ್ಗಕ್ಕೆ ನೆಲೆಯೊದಗಿಸಿಕೊಡುವ ಅಗತ್ಯವಿದೆ ಎಂದರು. ಬ್ಯಾಡಗೊಟ್ಟದಲ್ಲಿ 354 ಮನೆಗಳು ಹಾಗೂ ಬಸವನಹಳ್ಳಿಯಲ್ಲಿ 174 ಮನೆಗಳನ್ನು ನಿರ್ಮಿಸಿ, ಅಗತ್ಯ ಸೌಲಭ್ಯಗಳನ್ನು ಆದಿವಾಸಿಗಳಿಗೆ ನೀಡಲಾಗಿದೆ. ಇಲ್ಲಿ ನೆಲೆಸಿರುವವರಿಗೆ ಅಗತ್ಯ ಕೃಷಿ ಭೂಮಿಯನ್ನು ಕೇಳಲು ಅವಕಾಶವಿದೆ. ಪ್ರಸ್ತುತ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸೌಲಭ್ಯ ಒದಗಿಸುವುದು ಸೂಕ್ತವೆಂದರು.
ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿರುವ ಆದಿವಾಸಿ ಕುಟುಂಬಗಳ ಬದುಕಿಗೆ ಪೂರಕವಾಗಿ ಅಗತ್ಯ ಕೆಲಸವನ್ನು ಒದಗಿಸಬೇಕೆಂದು ಈಗಾಗಲೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು, ಅದಕ್ಕೂ ಸೂಕ್ತ ಸ್ಪಂದನೆ ದೊರಕಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪೊನ್ನಂಪೇಟೆಯ ಪಿ.ಎಸ್.ಮುತ್ತ, ಪ್ರಕಾಶ್ ಬ್ಯಾಡಗೊಟ್ಟ, ವೈ.ಬಿ.ಅಪ್ಪು ಹಾಗೂ ಮಾರ ಬಸವನಹಳ್ಳಿ ಉಪಸ್ಥಿತರಿದ್ದರು.







