ಮಾಜಿ ನ್ಯಾಯಾಧೀಶ ರಾಜೇಂದ್ರ ಮೆನನ್ ಸಶಸ್ತ್ರ ಪಡೆಗಳ ನ್ಯಾಯಾಧೀಕರಣದ ಮುಖ್ಯಸ್ಥ
ಹೊಸದಿಲ್ಲಿ, ಸೆ.30: ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ರಾಜೇಂದ್ರ ಮೆನನ್ ಅವರನ್ನು ಸಶಸ್ತ್ರ ಪಡೆಗಳ ನ್ಯಾಯಾಧೀರಕಣದ ಮುಖ್ಯಸ್ಥ ಸ್ಥಾನಕ್ಕೆ ನೇಮಿಸಲು ಸಲಹೆ ನೀಡಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ಸೋಮವಾರ ತಿಳಿಸಿದ್ದಾರೆ.
ಈ ನೇಮಕಾತಿಯನ್ನು ಕೇಂದ್ರ ಸರಕಾರ ಶೀಘ್ರದಲ್ಲಿ ಜಾರಿಗೊಳಿಸಲಿದೆ ಎಂದು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ್ಯಾಯಾಧೀಕರಣದ ಸದ್ಯ ಮುಖ್ಯಸ್ಥ ನ್ಯಾಯಮೂರ್ತಿ ವೀರೇಂದ್ರ ಸಿಂಗ್ ಅಕ್ಟೋಬರ್ 6ರಂದು ನಿವೃತ್ತಿ ಹೊಂದಲಿದ್ದಾರೆ. ಮೆನನ್, 2010ರ ಡಿಸೆಂಬರ್ನಿಂದ ಮಾರ್ಚ್ 2015ರವರೆಗೆ ಭೋಪಾಲ್ ಅನಿಲ ಸಂತ್ರಸ್ತರ ಪರಿಹಾರ ಆಯೋಗದ ಕಲ್ಯಾಣ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. 2016ರಿಂದ 2017ರ ವರೆಗೆ ಮಧ್ಯ ಪ್ರದೇಶ ಉಚ್ಚ ನ್ಯಾಯಾಲಯದ ಪ್ರಭಾರ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಮೆನನ್ ಅವರನ್ನು ಆಗಸ್ಟ್ 9,2018ರಂದು ದಿಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು.
ನ್ಯಾಯಾಧೀಕರಣ ಮುಖ್ಯಸ್ಥರ ಸೇವಾವಧಿಯನ್ನು ವಿಸ್ತರಿಸಬೇಕು ಮತ್ತು ಹೊಸ ನೇಮಕಾತಿಯನ್ನು ಮುಂದೂಡಬೇಕು ಎಂಬ ಮನವಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಗೊಗೊಯಿ ಈ ಘೋಷಣೆ ಮಾಡಿದ್ದಾರೆ.