ಕಾಶ್ಮೀರ ಕುರಿತ ಎಲ್ಲಾ ಮನವಿಗಳ ವಿಚಾರಣೆ ಮುಂದೂಡಿಕೆ

ಹೊಸದಿಲ್ಲಿ, ಸೆ. 30: ಜಮ್ಮು ಹಾಗೂ ಕಾಶ್ಮೀರದ ಕುರಿತ ಎಲ್ಲ ಮನವಿಗಳ ವಿಚಾರಣೆಯನ್ನು ಒಂದು ದಿನ ಮುಂದೂಡಲು ಸುಪ್ರೀಂ ಕೋರ್ಟ್ ಸೋಮವಾರ ನಿರ್ಧರಿಸಿದೆ. ಅಲ್ಲದೆ ಈ ಮನವಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಸಾಂವಿಧಾನಿಕ ಪೀಠ ಈ ಮನವಿಗಳ ವಿಚಾರಣೆಯನ್ನು ಮಂಗಳವಾರ ನಡೆಸಲಿದೆ.
ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ದಿನನಿತ್ಯ ನಡೆಸುತ್ತಿರುವುದರಿಂದ ನ್ಯಾಯಾಲಯಕ್ಕೆ ಸಮಯ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.
‘‘ಹಲವು ಪ್ರಕರಣಗಳ ವಿಚಾರಣೆ ನಡೆಸಲು ನಮಗೆ ಸಮಯ ಇಲ್ಲ. ನಮಗೆ ಸಾಂವಿಧಾನಿಕ ಪೀಠದ ಪ್ರಕರಣ (ಅಯೋಧ್ಯೆ ವಿವಾದ)ದ ವಿಚಾರಣೆ ಇದೆ’’ ಎಂದು ರಂಜನ್ ಗೊಗೊಯಿ ಹೇಳಿದ್ದಾರೆ.
ಕಾಶ್ಮೀರದಲ್ಲಿ ಪತ್ರಕರ್ತರ ಚಲನವಲನದ ಮೇಲೆ ನಿರ್ಬಂಧ ಹೇರಿರುವುದು ಹಾಗೂ ಅಪ್ರಾಪ್ತರನ್ನು ಕಾನೂನು ಬಾಹಿರವಾಗಿ ವಶದಲ್ಲಿ ಇರಿಸಿದ ಕುರಿತು ಪ್ರಶ್ನಿಸಿದ ಮನವಿಗಳ ವಿಚಾರಣೆಯನ್ನು ರಂಜನ್ ಗೊಗೊಯಿ ನೇತೃತ್ವದ ಪೀಠ ತನ್ನ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ಮಕ್ಕಳನ್ನು ವಶದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿ ಮಕ್ಕಳ ಹಕ್ಕು ಹೋರಾಟಗಾರರಾದ ಏನಾಕ್ಷಿ ಗಂಗೂಲಿ ಹಾಗೂ ಪ್ರೊ. ಶಾಂತಾ ಸಿನ್ಹಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಕೂಡ ನ್ಯಾಯಾಲಯ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಕಾಶ್ಮೀರ ಹಾಗೂ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದು ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗಳ ಜೊತೆಗೆ ಈ ಮನವಿಗಳ ವಿಚಾರಣೆಯನ್ನು ಸಂವಿಧಾನ ಪೀಠ ಮಂಗಳವಾರ ನಡೆಸಲಿದೆ.
ಕಾಂಗ್ರೆಸ್ ಸಂಸದ ಗುಲಾಂ ನಬಿ ಆಝಾದ್ ಅವರ ಮನವಿಯನ್ನು ಕೂಡ ಐವರು ಸದಸ್ಯರ ನ್ಯಾಯಪೀಠ ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಸಂವಹನ ನಿರ್ಬಂಧ ಹಿಂದೆ ತೆಗೆಯುವಂತೆ ಹಾಗೂ ಕಾಶ್ಮೀರದಲ್ಲಿ ಪತ್ರಕರ್ತರು ಮುಕ್ತವಾಗಿ ಚಲಿಸಲು ಅವಕಾಶ ನೀಡುವಂತೆ ಕೋರಿ ‘ಕಾಶ್ಮೀರಿ ಟೈಮ್ಸ್’ನ ಸಂಪಾದಕಿ ಅನುರಾಧಾ ಭಾಸಿನ್ ಸಲ್ಲಿಸಿದ ಮನವಿಯನ್ನು ಕೂಡ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ವಿಧಿ 370ಕ್ಕೆ ಸಂಬಂಧಿಸಿದ ಎಲ್ಲ ಮನವಿಗಳ ವಿಚಾರಣೆಯನ್ನು ಮಂಗಳವಾರ ನಡೆಸಲಿದೆ.