ಎಪಿಸಿಎಟಿ ಪುರಸ್ಕಾರಕ್ಕೆ ಪಾತ್ರವಾದ ಬೆಂಗಳೂರು
ಬೆಂಗಳೂರು, ಅ.1: ಧೂಮಪಾನ ನಿಯಂತ್ರಣ ಕಾನೂನುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಏಷಿಯಾ ಪೆಸಿಫಿಕ್ ಸಿಟೀಸ್ ಅಲಯನ್ಸ್ ಫಾರ್ ಟೊಬ್ಯಾಕೋ ಕಂಟ್ರೊಲ್ ಮತ್ತು ಎನ್ಸಿಡಿಎಸ್ ಪ್ರಿವೆನ್ಷನ್ ಸಂಸ್ಥೆ ನೀಡುವ 2019ರ ಎಪಿಸಿಎಟಿ ಪುರಸ್ಕಾರಕ್ಕೆ ಬೆಂಗಳೂರು ನಗರ ಪಾತ್ರವಾಗಿದೆ.
ಇಂಡೋನೇಷ್ಯಾದ ಬೊಗೋರ್ನ್ದಲ್ಲಿ ನಡೆದ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಯೋಜನಾ ನಿರ್ದೇಶಕಿ ಡಾ.ಬಿ.ಎಸ್.ತ್ರಿವೇಣಿ ಮಾತನಾಡಿ, ಇದು ಬೆಂಗಳೂರಿಗರಿಗೆ ಹೆಮ್ಮೆಯ ಕ್ಷಣ ಹಾಗೂ ನಾಗರಿಕರನ್ನು ಪರೋಕ್ಷ ಧೂಮಪಾನದಿಂದ ರಕ್ಷಿಸಲು ಕ್ರಮ ಕೈಗೊಂಡ ಅಧಿಕಾರಿಗಳ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಬಿಎಂಪಿ ತಂಬಾಕು ನಿಯಂತ್ರಣ ಕಾರ್ಯಕ್ರಮದ ಮುಖ್ಯಸ್ಥೆ ಡಾ.ಎಸ್.ಕೆ. ಸವಿತಾ ಮಾತನಾಡುತ್ತಾ, ಸಮಸ್ಯೆ ಇನ್ನೂ ಗಂಭೀರವಾಗಿಯೇ ಇದೆ. ಇತ್ತೀಚಿನ ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ(ಜಿಎಟಿಎಸ್) ಪ್ರಕಾರ, ಧೂಮಪಾನಿಗಳಲ್ಲದವರು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿನ ಹೊಗೆಗೆ ಸಿಲುಕುವ ಪ್ರಮಾಣ ಶೇ.23.9 ಇದೆ. ಹೊಗೆ ಕುಡಿಯುವುದು ಧೂಮಪಾನದಷ್ಟೇ ಹಾನಿಕರ ಎನ್ನುವುದಕ್ಕೆ ಸಾಕ್ಷಿಯಿದೆ. ಈ ಪುರಸ್ಕಾರವು ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಸ್ಪೂರ್ತಿ ತುಂಬಲಿದೆ ಎಂದು ಹೇಳಿದ್ದಾರೆ.