ಸ್ಥಳೀಯ ಚುನಾವಣೆ ಹಿನ್ನೆಲೆ: ಗೃಹ ಬಂಧನದಿಂದ ಮುಕ್ತರಾದ ಜಮ್ಮು ರಾಜಕೀಯ ನಾಯಕರು
ಹೊಸದಿಲ್ಲಿ, ಅ.2: ಜಮ್ಮು ಹಾಗೂ ಕಾಶ್ಮೀರದ ಆಡಳಿತ ಜಮ್ಮುವಿನ ಬಹುತೇಕ ಎಲ್ಲ ರಾಜಕೀಯ ನಾಯಕರುಗಳನ್ನು ಗೃಹ ಬಂಧನದಿಂದ ಮುಕ್ತಗೊಳಿಸಿದೆ. ಕಾಶ್ಮೀರದ ಪ್ರಮುಖ ನಾಯಕರಾದ ಎನ್ಸಿಪಿಯ ಉಮರ್ ಅಬ್ದುಲ್ಲಾ ಹಾಗೂ ಫಾರೂಕ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಜಮ್ಮು-ಕಾಶ್ಮೀರ ಪೀಪಲ್ ಕಾನ್ಫರೆನ್ಸ್ನ ಸಜ್ಜದ್ ಘನಿ ಲೋನ್ ಹಾಗೂ ಇತರ ಪ್ರಮುಖರ ಗೃಹ ಬಂಧನ ಮುಂದುವರಿಸಲಾಗಿದೆ.
ಜಮ್ಮುವಿನಲ್ಲಿರುವ ರಾಷ್ಟ್ರೀಯ ಕಾನ್ಫರೆನ್ಸ್(ಎನ್ಸಿ), ಕಾಂಗ್ರೆಸ್ ಹಾಗೂ ಜಮ್ಮು-ಕಾಶ್ಮೀರದ ನ್ಯಾಶನಲ್ ಪ್ಯಾಂಥರ್ಸ್ ಪಾರ್ಟಿ(ಜೆಕೆಎನ್ಪಿಪಿ)ನಾಯಕರನ್ನು ಬಂಧನದಿಂದ ಮುಕ್ತಗೊಳಿಸಲಾಗಿದ್ದು, ಅವರ ಮೇಲಿನ ನಿರ್ಬಂಧ ತೆಗೆಯಲಾಗಿದೆ. ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿಯನ್ನು ರದ್ದುಪಡಿಸಿದ ಬಳಿಕ ಎಲ್ಲ ನಾಯಕರನ್ನು ಗೃಹಬಂಧನದಲ್ಲಿಡಲಾಗಿತ್ತು.
ಎನ್ಸಿ ನಾಯಕರುಗಳಾದ ದೇವೇಂದರ್ ರಾಣಾ, ಎಸ್ಎಸ್ ಸಲಾಥಿಯ, ಕಾಂಗ್ರೆಸ್ನ ರಮನ್ ಭಲ್ಲಾ ಹಾಗೂ ಜೆಕೆಎನ್ಪಿಪಿ ನಾಯಕ ಹರ್ಷದೇವ್ ಸಿಂಗ್ರಂತಹ ನಾಯಕರನ್ನು ಗೃಹ ಬಂಧನದಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ಎರಡನೇ ಹಂತದ ಪಂಚಾಯತ್ ರಾಜ್ ಪದ್ಧತಿಯಾಗಿರುವ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ಗೆ ಸರಕಾರ ಚುನಾವಣೆ ಘೋಷಿಸಿರುವ ಹಿನ್ನೆಲೆಯಲ್ಲಿ ಜಮ್ಮು ನಾಯಕರನ್ನು ಗೃಹ ಬಂಧನದಿಂದ ಮುಕ್ತಗೊಳಿಸಲಾಗಿದೆ.