ಸಮಾಜದ ನೆಮ್ಮದಿ ಶಾಂತಿಗಾಗಿ ಪ್ರಯತ್ನಿಸುವುದು ನಮ್ಮೆಲ್ಲರ ಹೊಣೆ: ಯೆನೆಪೊಯ ಅಬ್ದುಲ್ಲಾ ಕುಂಞಿ
ಸೌಹಾರ್ದ ಸಮಾಗಮ ಕಾರ್ಯಕ್ರಮ

ಮಂಗಳೂರು, ಅ.2: ಸಮಾಜದ ಶಾಂತಿ, ನೆಮ್ಮದಿಗಾಗಿ ಪ್ರಯತ್ನಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ನ ಅಧ್ಯಕ್ಷ ಯೆನೆಪೊಯ ಅಬ್ದುಲ್ಲಾ ಕುಂಞಿ ತಿಳಿಸಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಬುಧವಾರ ನಗರದ ಓಶಿಯನ್ ಪರ್ಲ್ನಲ್ಲಿ ಆಯೋಜಿಸಲಾದ ಸೌಹಾರ್ದ ಸಮಾಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಶಿಕ್ಷಣದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ನಾವು ಕಳೆದು ಕೊಂಡ ಶಾಂತಿ, ಸೌಹಾರ್ದತೆಯನ್ನು ಮತ್ತೆ ಸಮಾಜದಲ್ಲಿ ಬೆಳೆಸ ಬೇಕಾಗಿದೆ. ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಕರ್ನಾಟಕ ಮುಸ್ಲಿಂ ಜಮಾಅತ್ನ ಪ್ರಧಾನ ಕಾರ್ಯದರ್ಶಿ ಮೌಲನಾ ಶಾಫಿ ಸಅದಿ ಮಾತನಾಡಿ, ಬಲವಂತದ ಮತಾಂತರ ಇಸ್ಲಾಂನ ಆಚರಣೆಯಲ್ಲಿಲ್ಲ. ಇಸ್ಲಾಂ ಅದಕ್ಕೆ ಸಮ್ಮತಿಸುವುದೂ ಇಲ್ಲ. ಭಯೋತ್ಪಾದಕ ಮುಸಲ್ಮಾನನಾಗಲು ಸಾಧ್ಯವಿಲ್ಲ. ಮೊದಲು ನಮ್ಮ ಅಪನಂಬಿಕೆ ಗಳನ್ನು ದೂರ ಮಾಡಿಕೊಳ್ಳಬೇಕಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಕೇಮಾರು ಮಠದ ಈಶವಿಠಲದಾಸ ಸ್ವಾಮೀಜಿ ಮಾತನಾಡಿ, ಜಗತ್ತನ್ನು ಬದಲಾಯಿಸಲು ಒಳ್ಳೆಯ ಚಿಂತನೆಯ ಸಣ್ಣ, ಸಣ್ಣ ಪ್ರಯತ್ನಗಳು ಸಾಕು. ಜನರ ಕಷ್ಟಗಳಿಗೆ ನೆರವು ನೀಡುವುದೇ ಧರ್ಮಗಳ ಆಚರಣೆಯಾಗಬೇಕು ಎಂದರು.
ರೆ.ಫಾ.ಡಾ.ರವಿ ಸಂತೋಷ್ ಕುಮಾರ್ ಎಸ್.ಜೆ. ಮಾತನಾಡಿ, ಭಾರತ ಬಹುಧರ್ಮ, ಸಂಸ್ಕೃತಿಯ ದೇಶ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಒಂದೇ ಕುಟುಂಬದ ಸದಸ್ಯರಂತೆ ಸೌಹಾರ್ದ ತೆಯೊಂದಿಗೆ ಮಾನವೀಯತೆ ಯೊಂದಿಗೆ ಬದುಕಬೇಕಾಗಿದೆ ಎಂದರು.
ಡಾ. ಮೌಲಾನ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡುತ್ತಾ, ಭಿನ್ನತೆಯೊಂದಿಗೆ ನಮ್ಮ ಆಚಾರ ವಿಚಾರಗಳಿದ್ದರು ಪರಸ್ಪರ ಶಾಂತಿ, ನೆಮ್ಮದಿ ಯೊಂದಿಗೆ ಬದುಕುವ ವಿಚಾರ ದಲ್ಲಿ ಅಪನಂಬಿಕೆ ಇರಬಾರದು. ಮಾನವ ಸಮುದಾಯ ಮೇಲೆ ಬರ್ಬರ ಕೃತ್ಯ ಮಾಡುವ ಐಎಸ್ಐ ಹೆಸರಿನಂತಹ ಸಂಘಟನೆಯನ್ನು ನೈಜ ಇಸ್ಲಾಂ ನ ಅನುಯಾಯಿಗಳು ಬೆಂಬಲಿಸಲು ಸಾಧ್ಯವಿಲ್ಲ. ಈ ನಾಡಿನ ಎಲ್ಲಾ ಜನರು ಒಗ್ಗಟ್ಟಿನಿಂದ ಬದುಕುವ ಚಿಂತನೆ ಎಲ್ಲಾ ಕಡೆ ವಿಸ್ತರಣೆ ಯಾಗ ಬೇಕು.ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನ ಯಶಸ್ಸಿಯಾಗಲಿ ಎಂದರು.
ಎಲ್ಲಾ ಜನರು ನೆಮ್ಮದಿಯಿಂದ ಬದುಕಬೇಕು ಎನ್ನುವುದು ನಮ್ಮೆಲ್ಲರ ಅಂತಿಮ ಗುರಿ. ಈ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ನ ಪ್ರಯತ್ನ ಶ್ಲಾಘನೀಯ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.
*ಪ್ರೊ.ಎಂ. ಬಿ.ಪುರಾಣಿ ಕ್ ಮಾತನಾಡುತ್ತಾ, ಧರ್ಮಗಳ ನಡುವಿನ ಅಪನಂಬಿಕೆಗಳನ್ನು ದೂರಮಾಡುವ ಕೆಲಸ ಜೊತೆಯಾಗಿ ಆಗಬೇಕಾಗಿದೆ.
*ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡುತ್ತಾ ಹೆಚ್ಚು ಸುಶಿಕ್ಷಿತರು ಇರುವಲ್ಲಿ ಸೌಹಾರ್ದತೆಯ ಸಮಸ್ಯೆ ಇರುವುದು. ಗ್ರಾಮಾಂತರದಲ್ಲಿ ಹೆಚ್ಚು ಅವಿಧ್ಯಾವಂತರು ಇರುವುದರಿಂದ ಈ ಸಮಸ್ಯೆ ಕಡಿಮೆ. ಮೊದಲು ಹೆಚ್ಚು ಓದಿದವರು ಈ ಬಗ್ಗೆ ಮೊದಲು ಚಿಂತನೆ ಮಾಡಿದಾಗ ಮಂಗಳೂರು ನಿರ್ಮಾಣವಾಗುತ್ತದೆ.
*ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡುತ್ತಾ ಪರಸ್ಪರ ಅಪನಂಬಿಕೆ ಗಳ ಕಾರಣ ದಿಂದ ನಡೆದ ಜಗಳದಲ್ಲಿ ಸಾಕಷ್ಟು ಮಂದಿ ಸಾವಿಗೀಡಾಗಿದ್ದಾರೆ. ಎಲ್ಲಾ ಧರ್ಮ ಗಳ ಬಗ್ಗೆ ಶಿಕ್ಷಣ ಸಂಸ್ಥೆ ಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಕೊಡಬೇಕಾಗಿದೆ.
*ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಮಾತನಾಡುತ್ತಾ ಅಹಿತಕರ ಘಟನೆಗಳು ನಡೆಯುವ ಮೊದಲೆ ಸೌಹಾರ್ದತೆ ಯ ಬಗ್ಗೆ ಚರ್ಚೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
*ಪ್ರದೀಪ್ ಕುಮಾರ್ ಕಲ್ಕೂರ, ಎಂ.ಜಿ.ಹೆಗ್ಡೆ, ಡಾ.ಶಾಂತರಾಮ ಶೆಟ್ಟಿ ಮಾತನಾಡುತ್ತಾ, ದ್ವೇಷದಿಂದ,ಅಸೂಯೆಯನ್ನು ಮೀರಿ ಬೆಳೆಯುವ ಗುಣಲಕ್ಷಣಗಳು ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದರು.
ಮಾಜಿ ಮೇಯರ್ ಭಾಸ್ಕರ ಕೆ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಮೊಯ್ದಿನ್ ಬಾವ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್, ಯೂನಿಟಿ ಹೆಲ್ತ್ ಕಾಂಪ್ಲೆಕ್ಸ್ ನ ಅಧ್ಯಕ್ಷ ಡಾ.ಹಬೀಬ್ ರಹ್ಮಾನ್, ಅಬೂ ಸೂಫಿಯಾನ್, ಹೈದರ್ ಪರ್ತಿಪ್ಪಾಡಿ, ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉದ್ಯಮಿ ಕೆ.ಸಿ.ನಾಯ್ಕಾ, ಅರ್ಷದ್ ಮೊಹ್ತೆಶ್ಯಾಂ, ಅಬ್ದುಲ್ ರಹ್ಮಾನ್ ಕತರ್, ಅಬ್ದುಲ್ ರವೂಫ್ ಪುತ್ತಿಗೆ ಉಪಸ್ಥಿತರಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ನ ಜಿಲ್ಲಾ ಸಮಿತಿ ಅಧ್ಯಕ್ಷ ಯೆನೆಪೊಯ ಅಬ್ದುಲ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಾಧ್ಯಕ್ಷ ಎಸ್. ಎಂ.ರಶೀದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎಂ. ಮಮ್ತಾಝ್ ಅಲಿ ವಂದಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಹಾಗೂ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

















