ಮ.ಪ್ರ: ಗಾಂಧೀಜಿಯವರ ಚಿತಾಭಸ್ಮ ಕಳ್ಳತನ, ಪೋಸ್ಟರ್ನಲ್ಲಿ ‘ರಾಷ್ಟ್ರವಿರೋಧಿ’ ಬರಹ
ಭೋಪಾಲ.ಅ.2: ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯಾದ ಬುಧವಾರವೇ ಅಪರಿಚಿತ ದುಷ್ಕರ್ಮಿಗಳು ಅವರ ಚಿತಾಭಸ್ಮವನ್ನು ಕದ್ದು,ಅವರ ಭಾವಚಿತ್ರವಿದ್ದ ಪೋಸ್ಟರ್ನಲ್ಲಿ ‘ ರಾಷ್ಟ್ರ ದ್ರೋಹಿ’ ಎಂದು ಕಪ್ಪು ಬಣ್ಣದಲ್ಲಿ ಬರೆದಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಲಕ್ಷ್ಮಣ ಬಾಗ್ನಲ್ಲಿರುವ ಬಾಪು ಭವನದಲ್ಲಿ ಗಾಂಧೀಜಿಯವರ ಚಿತಾಭಸ್ಮ ಮತ್ತು ಪೋಸ್ಟರ್ನ್ನು ಇರಿಸಲಾಗಿತ್ತು. ಭವನವನ್ನು 1984ರಲ್ಲಿ ನಿರ್ಮಿಸಲಾಗಿದ್ದು,ಆಗಿನಿಂದಲೂ ಲಕ್ಷ್ಮಣ ಬಾಗ್ ಟ್ರಸ್ಟ್ ಇದನ್ನು ಸಂರಕ್ಷಿಸಿಕೊಂಡು ಬಂದಿದೆ.
ಬುಧವಾರ ಬೆಳಿಗ್ಗೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಗಾಂಧಿಯವರಿಗೆ ಗೌರವಾರ್ಪಣೆಗಾಗಿ ಭವನಕ್ಕೆ ತೆರಳಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗುರ್ಮೀತ್ ಸಿಂಗ್ರ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಗಾಂಧೀಜಿಯವರ ಸಿದ್ಧಾಂತವನ್ನು ಮತ್ತೆ ಅವಮಾನಿಸಲಾಗಿದೆ. ಗಾಂಧೀಜಿಯವರ ಹಂತಕ ನಾಥುರಾಮ ಗೋಡ್ಸೆಯ ಹಿಂಬಾಲಕರು ಈ ಕಾನೂನುಬಾಹಿರ ಕೃತ್ಯವನ್ನೆಸಗಿದ್ದಾರೆ. ಇಂತಹ ಹುಚ್ಚುತನಗಳು ನಿಲ್ಲಬೇಕು ಎಂದು ಸಿಂಗ್ ಹೇಳಿದರು.