ಪ್ರವಾಹ ಪೀಡಿತ ಸ್ಥಳಗಳ ಸಮೀಕ್ಷೆ ವೇಳೆ ನದಿಯಲ್ಲಿ ದೋಣಿ ಪಲ್ಟಿ: ಬಿಜೆಪಿ ಸಂಸದ ಪಾರು
ಪಾಟ್ನಾ, ಅ.3: ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ಪ್ರವಾಹ ಪೀಡಿತ ಗ್ರಾಮೀಣ ಪಾಟ್ನಾ ಕ್ಷೇತ್ರದಲ್ಲಿ ಬುಧವಾರ ಸಮೀಕ್ಷೆ ನಡೆಸುತ್ತಿದ್ದ ವೇಳೆ ದೋಣಿ ಪಲ್ಟಿಯಾದ ಕಾರಣದಿಂದಾಗಿ ಅವರು ನದಿಗೆ ಬಿದ್ದಿದ್ದಾರೆ. ಸ್ಥಳೀಯರು ನದಿಗೆ ಜಿಗಿದು ರಾಮ್ ಕೃಪಾಲ್ ಯಾದವ್ ಅವರನ್ನು ರಕ್ಷಿಸಿದರು. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಾಟಲಿಪುತ್ರದಿಂದ ಎರಡು ಬಾರಿ ಸಂಸದರಾಗಿ ಲೋಕಸಭೆ ಪ್ರವೇಶಿಸುತ್ತಿದ್ದ ಯಾದವ್ ಪ್ರವಾಹ ಪೀಡಿತ ಗ್ರಾಮೀಣ ಪಾಟ್ನಾದ ಗ್ರಾಮವೊಂದರಿಂದ ದೋಣಿಯಲ್ಲಿ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬಿದಿರು ಮತ್ತು ಟೈರ್-ಟ್ಯೂಬ್ಗಳಿಂದ ಮಾಡಿದ ದೋಣಿಯಲ್ಲಿ ರಾಮ್ ಕೃಪಾಲ್ ಯಾದವ್ ತನ್ನ ಬೆಂಬಲಿಗರೊಂದಿಗೆ ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಅವರ ದೋಣಿ ಮಗುಚಿಬಿದ್ದಿದೆ ಎಂದು ವರದಿ ತಿಳಿಸಿದೆ.
"ರಾಜ್ಯ ಆಡಳಿತವು ಪಾಟ್ನಾವನ್ನು ಮಾತ್ರ ಕೇಂದ್ರೀಕರಿಸಿದೆ. ಗ್ರಾಮೀಣ ಪ್ರದೇಶಗಳನ್ನು ನೋಡುತ್ತಿಲ್ಲ. ಆಹಾರದ ಅಲಭ್ಯತೆಯಿಂದಾಗಿ ಜಾನುವಾರುಗಳು ಸಾಯುತ್ತಿವೆ. ನನಗೆ ದೋಣಿ ಕೂಡ ಸಿಗಲಿಲ್ಲ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ನಾನು ತಾತ್ಕಾಲಿಕ ದೋಣಿ ಬಳಸಬೇಕಾಯಿತು" ಎಂದು ಯಾದವ್ ಘಟನೆಯ ನಂತರ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದರು.
ಯಾದವ್ ಅವರು 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರತಿಯನ್ನು ಸೋಲಿಸಿದ್ದರು.ಕಳೆದ ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಸೆಪ್ಟೆಂಬರ್ನ ಕೊನೆಯ ಮೂರು ದಿನಗಳಲ್ಲಿ ಸುರಿದ ಭಾರೀ ಮಳೆಗೆ 55 ಮಂದಿ ಬಲಿಯಾಗಿದ್ದಾರೆ. ಸುಮಾರು 21.45 ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ ಪಾಟ್ನಾ ನಗರದಲ್ಲಿ ಸೆಪ್ಟೆಂಬರ್ 27 ರಿಂದ 29 ರವರೆಗೆ 342.5 ಮಿ.ಮೀ ಮಳೆಯಾಗಿದೆ.