ಹಿರಿಯಡಕ: ಗಾಂಧಿ ಕುರಿತು ಉಪನ್ಯಾಸ

ಉಡುಪಿ, ಅ.3: ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಮಹಾತ್ಮಾ ಗಾಂಧಿ ತತ್ವ ಪ್ರಣೀತ ವಾರ್ಷಿಕ ವಿಶೇಷ ಶಿಬಿರದಲ್ಲಿ ಬುಧವಾರ ‘ಗಾಂಧೀಜಿ: ಕೆಲವು ಟಿಪ್ಪಣಿಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಾಹಿತ್ಯ ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಇಂದು ಗಾಂಧೀಜಿ ಅವರನ್ನು ವೈಭವೀಕರಿಸುವುದು ಅಲ್ಲ; ಅವರು ಕೃಷ್ಣನ ಅವತಾರವೂ ಅಲ್ಲ ಎನ್ನುತ್ತಾ ಗಾಂಧೀಜಿ-ಕೃಷ್ಣನ ಬದುಕಿನ ಸಮೀಕರಣದ ಮೂಲಕ ಗಾಂಧೀಜಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟರು.
ಚರಕ ಸ್ವದೇಶಿ ಚಳವಳಿಯ ಅಸ್ತ್ರವಾಗಿದ್ದು, ಕೈಮಗ್ಗದ ನಾಶ ಬ್ರಿಟಿಷರಿಂದ ಆರಂಭವಾಯಿತು. ಇಂದು ಕೈಮಗ್ಗದ ನೇಕಾರರು ಸಂಕಷ್ಟದಲ್ಲಿದ್ದಾರೆ. ಜೊತೆಗೆ ಗಾಂಧಿಯ ನೆನಪಿನಲ್ಲಿ ಹೋರಾಟವನ್ನು ಮಾಡುತ್ತಿರುತ್ತಾರೆ. ಯಂತ್ರ ಬೇಕು ಸರಿ; ಆದರೆ ಅದು ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಬಾರದು ಎಂದು ಗಾಂಧೀಜಿ ಪ್ರತಿಪಾದಿಸಿ, ಯಾಂತ್ರೀಕರಣಕ್ಕೆ ವಿರೋಧನ್ನು ವ್ಯಕ್ತಪಡಿಸಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸದಾನಂದ ಪ್ರಭು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಮಾತನಾಡಿ, ಗಾಂಧೀಜಿ ಎಂದರೆ ಆದರ್ಶ ಎಂಬ ಕಾಲಘಟ್ಟ ಹಾಗೂ ವ್ಯಂಗ್ಯ ಎಂಬ ಕಾಲಘಟ್ಟವನ್ನು ಹಾದು ಬಿಕ್ಕಟ್ಟಿನ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಗಾಂಧಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿಗಳಾದ ಪ್ರವೀಣ ಶೆಟ್ಟಿ, ಸುಾಷ್ ಹೆಚ್. ಕೆ. ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಎನ್ನೆಸ್ಸೆಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ತಾದೇಶ್ ಸ್ವಾಗತಿಸಿ, ಸಂಗೀತಾ ಟಿ. ನಿರೂಪಿಸಿದರು. ಸುಚೀಂದ್ರ ವಂದಿಸಿದರು.







