ಉಡುಪಿ: ಜಿಲ್ಲಾ ಮಹಿಳಾ ಕಾಂಗ್ರೆಸ್ನಿಂದ ಗಾಂಧಿ ನಮನ-150

ಉಡುಪಿ, ಅ.3: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಹಾಗೂ ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಅವರ 115ನೇ ಜಯಂತಿಯನ್ನು ಬ್ರಹ್ಮಗಿರಿ ಯಲ್ಲಿರುವ ಕಾಂಗ್ರೆಸ್ ಭವನದಲ್ಲಿ 150 ಮಣ್ಣಿನ ಹಣತೆಗಳನ್ನು ಪ್ರಜ್ವಲಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಆರಂಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬಸ್ನಿಲ್ದಾಣದ ಬಳಿ ಇರುವ ಗಾಂಧೀ ಪುತ್ಥಳಿಗೆ ಹಾರಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾಂಗ್ರೆಸ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಗಾಂಧೀಜಿ ಅವರ ಪ್ರಮುಖ ತತ್ವಗಳಾಗಿರುವ ಸತ್ಯ, ಅಹಿಂಸೆ, ಸಹಿಷ್ಣುತೆಗಳಿಗಾಗಿ 150 ವರ್ಷಗಳ ಬಳಿಕವೂ ಇಡೀ ಜಗತ್ತು ಅವರನ್ನು ಸ್ಮರಿಸಿಕೊಳ್ಳುತ್ತಿದೆ. ಭಾರತದಲ್ಲಿ ಜನ್ಮ ತಾಳಿದ ಒಬ್ಬ ಸಾಮಾನ್ಯ ವ್ಯಕ್ತಿ ಇಡೀ ವಿಶ್ವದಲ್ಲಿ ಇಂದು ಅಸಾಮಾನ್ಯನಾಗಿ ನೆನಪಿಸಲ್ಪ ಡುತ್ತಿರುವುದು ದೇಶದ ಪ್ರತಿಯೊಬ್ಬರೂ ಹೆಮ್ಮೆ ಪಡುವ ವಿಚಾರ ಎಂದರು.
ಮಹಿಳಾ ಕಾಂಗ್ರೆಸ್ನ ಹಿರಿಯ ನಾಯಕಿ ಶ್ಯಾಮಲಾ ಭಂಡಾರಿ ಮಾತನಾಡಿ ಗಾಂಧೀಜಿ ಅವರ ಕನಸಿನ ಸ್ವಾತಂತ್ರ ಭಾರತಕ್ಕಿನ್ನೂ ಸಿಗದಿರುವುದು ದೊಡ್ಡ ದುರಂತವೇ ಸರಿ. ಈ ಬಗ್ಗೆ ನಾವೆಲ್ಲಾ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ನುಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಮಹಾತ್ಮಾ ಗಾಂಧಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿ ಅವರಂಥ ಮಹಾನ್ ವ್ಯಕ್ತಿತ್ವಗಳ ಅಗತ್ಯ ಇಂದಿನ ಪರಿಸ್ಥಿತಿಯಲ್ಲಿ ತುಂಬಾ ಇದೆ. ಸರಳತೆ, ಸಹೋದರತೆಗಳನ್ನು ನಾವು ಈ ನಾಯಕರ ಜೀವನ ಚರಿತ್ರೆಗಳಿಂದ ಕಲಿತು. ಅದನ್ನು ಮುಂದಿನ ಪೀಳಿಗೆಗೂ ಕಲಿಸಬೇಕಾಗಿದೆ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಗೀತಾ ವಾಗ್ಳೆ ಸ್ವಾಗತಿಸಿದರು. ಆರಂಭದಲ್ಲಿ ಗಾಂಧೀಜಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಮ್ ಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಗಾಂಧೀಜಿ ಹಾಗೂ ಶಾಸ್ತ್ರಿಯವರ ಭಾವಚಿತ್ರದೆದುರು ಹಣತೆಗಳನ್ನು ಪ್ರಜ್ವಲಿಸುವ ಮೂಲಕ ಉಭಯ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಯು.ಆರ್.ಸಭಾಪತಿ, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಪಾಧ್ಯಕ್ಷ ಶಬ್ಬೀರ್ ಅಹ್ಮದ್, ಕಾರ್ಯದರ್ಶಿ ಹರೀಶ್ ಕಿಣಿ, ತಾಪಂ ಸದಸ್ಯೆ ಸುಜಾತಾ ಸುವರ್ಣ, ಬ್ಲಾಕ್ ಅಧ್ಯಕ್ಷರಾದ ಸಂಧ್ಯಾ ಶೆಟ್ಟಿ, ಮಮತಾ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಸುಜಾತಾ ಆಚಾರ್ಯ, ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಸರಸ್ವತಿ ನಾಯ್ಕೆ, ಮೀನಾಕ್ಷಿ ಮಾಧವ ಬನ್ನಂಜೆ,ಚಂದ್ರಾವತಿ ಭಂಡಾರಿ, ಮಹಾಬಲ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ಇಸ್ಮಾಯಿಲ್ ಆತ್ರಾಡಿ, ರೋಶನಿ ಒಲಿವರ್ ಹಾಗೂ ಇತರರು ಉಪಸ್ಥಿತರಿದ್ದರು.
ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿ, ಗೋಪಿ ಕೆ.ನಾಯ್ಕ ವಂದಿಸಿದರು.







