ಬಂಟರ ಮಾತೃ ಸಂಘದಿಂದ ಪ್ರತಿಭಾ ಪುರಸ್ಕಾರ

ಮಂಗಳೂರು, ಅ.4: ಬಂಟರ ಯಾನೆ ನಾಡವರ ಮಾತೃಸಂಘ(ರಿ) ಮಂಗಳೂರು ತಾಲೂಕು ಸಮಿತಿಯ ವತಿಯಿಂದ 2018-19ನೇ ಸಾಲಿನ ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆರ್ಥಿಕ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್ ಅಮೃತೋತ್ಸವ ಕಟ್ಟಡದ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಗುರದೇವ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷ ಸಿಎ ರಾಮಮೋಹನ ರೈ ಪ್ರತಿಭಾ ಪುರಸ್ಕಾರವು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ಪ್ರೇರಣೆಯಾಗಲಿದೆ. ವಿದ್ಯೆ ಕಲಿತು ವಿದ್ಯಾವಂತರಾದರೆ ಎಲ್ಲೂ ಬದುಕು ಸಾಗಿಸಬಹುದು ಎಂದು ಹೇಳಿದರು.
ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶ್ರವಣ್ ಶೆಟ್ಟಿ, ಪೂರ್ವಿಶ್ ರೈ, ಕಾರ್ತಿಕ್ ಶೆಟ್ಟಿ ಹಾಗೂ ಎಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ರಾಜೇಶ್ವರಿ ಜೆ. ಶೆಟ್ಟಿ, ಸಹಜಾ ಆಳ್ವ, ಪ್ರೇರಣಾ ಶೆಟ್ಟಿ, ಪ್ರತೀತಾ ಪಿ. ಶೆಟ್ಟಿ, ದೇವಿಕಾ ಸಂತೋಷ್ ರೈ, ಶಿವಾನಿ ರೈ, ವೈಷ್ಣ ವಿ ಜೆ. ಶೆಟ್ಟಿ, ಅನುಶ್ರೀ ರೈ, ಆಶಯ್ ಶೆಟ್ಟಿ, ನಿಖಿಲ್ ಶೆಟ್ಟಿ, ಪ್ರಖ್ಯಾತ್ ವೈ ಬಿ. ಹಾಗೂ 45 ಮಂದಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ಪ್ರೋತ್ಸಾಹ ಧನ ವಿತರಿಸಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಎಸ್ ಶೆಟ್ಟಿ ಉಪಸ್ಥಿತರಿದ್ದರು.
ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಕೆ. ಉಮೇಶ್ ರೈ ವಂದಿಸಿದರು. ಪ್ರತಿಭಾ ಪುರಸ್ಕಾರ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಶೆಟ್ಟಿ ಕೆಎಂ ಕಾರ್ಯಕ್ರಮ ನಿರೂಪಿಸಿದರು.







