ದೇಶದದಲ್ಲಿ ಕೋಮು ಧ್ರುವೀಕರಣಕ್ಕೆ ಆರೆಸ್ಸೆಸ್, ಬಿಜಿಪಿಯಿಂದ ಎನ್ಪಿಆರ್, ಎನ್ಆರ್ಸಿ ನಕಲು: ಸಿಪಿಎಂ ಆರೋಪ
ಹೊಸದಿಲ್ಲಿ, ಅ. 4: ದೇಶದಲ್ಲಿ ಕೋಮು ಮತ ಬ್ಯಾಕ್ ಹಾಗೂ ಕೋಮು ಧ್ರುವೀಕರಣ ತೀವ್ರಗೊಳಿಸುವ ಪ್ರಯತ್ನದ ಒಂದು ಭಾಗವಾಗಿ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್ಪಿಆರ್) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)ಯನ್ನು ನಕಲುಗೊಳಿಸಲು ಬಿಜೆಪಿ ಹಾಗೂ ಆರೆಸ್ಸೆಸ್ ಪ್ರಯತ್ನಿಸುತ್ತಿದೆ ಎಂದು ಸಿಪಿಎಂ ಶುಕ್ರವಾರ ಆರೋಪಿಸಿದೆ.
ಪಕ್ಷದ ಕೇಂದ್ರ ಸಮಿತಿಯ ಎರಡು ದಿನಗಳ ಸಭೆಯ ಸಮಾರೋಪದ ಬಳಿಕ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಎನ್ಸಿಆರ್ ಅಸ್ಸಾಂಗೆ ಸಂಬಂಧಿಸಿದ್ದು ಹಾಗೂ ಅದು ಆ ರಾಜ್ಯಕ್ಕೆ ಸೀಮಿತವಾಗಿದೆ. ಆದರೆ, ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲೂ ಎನ್ಆರ್ಸಿ ಜಾರಿಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ ಎಂದರು.
‘‘ಎನ್ಪಿಆರ್ ಅಪಾಯಕಾರಿ. ಆದರೆ, ಎನ್ಪಿಆರ್ನ್ನು ಈ ಸರಕಾರ ಪುನರುಜ್ಜೀವನಗೊಳಿಸಿತು. ಈ ಎನ್ಪಿಆರ್ ಆಧಾರದಲ್ಲಿ ದೇಶಾದ್ಯಂತ್ಯ ಎನ್ಆರ್ಸಿ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಬಂಧನ ಕೇಂದ್ರಗಳಾಗಿ ಬಳಸಲು ಕಟ್ಟಡಗಳನ್ನು ನಿರ್ಮಾಣ ಮಾಡಿ ಎಂದು ಕೆಲವು ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿದೆ’’ ಎಂದು ಅವರು ಹೇಳಿದ್ದಾರೆ.
ಎನ್ಆರ್ಸಿಯನ್ನು ಅಸ್ಸಾಂನಿಂದ ಹೊರಗೆ ವಿಸ್ತರಿಸುವುದಕ್ಕೆ ಸಿಪಿಎಂನ ಕೇಂದ್ರ ಸಮಿತಿ ವಿರೋಧ ವ್ಯಕ್ತಪಡಿಸಿದೆ.