ಜೈಶಂಕರ್ ಪ್ರತಿಪಾದಿಸಿದ ಮೈನಸ್ ವನ್ ಸಿದ್ಧಾಂತ ಏನು ಗೊತ್ತೇ?
ಹೊಸದಿಲ್ಲಿ: ಭಾರತದ ನೆರೆರಾಷ್ಟ್ರಗಳ ಪಟ್ಟಿಯಿಂದ ಒಂದು ದೇಶವನ್ನು ಕಳೆದರೆ ಅದು ಪ್ರಾದೇಶಿಕ ಸಹಕಾರದ ಉತ್ತಮ ಕಥನವಾಗಬಹುದು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯಾ ಎಕನಾಮಿಕ್ ಸಮಿಟ್ನಲ್ಲಿ ಮಾತನಾಡಿದ ಅವರು ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿದರು. "ಇಡೀ ನೆರೆರಾಷ್ಟ್ರಗಳಿಂದ ಒಂದನ್ನು ಕಳೆದರೆ ವಾಸ್ತವವಾಗಿ ಅದು ನ್ಯಾಯಸಮ್ಮತ ಪ್ರಾದೇಶಿಕ ಸಹಕಾರದ ಕಥನವಾಗಬಹುದು. ಮೈನಸ್ ವನ್ ಕಾಯಂ ಅಲ್ಲ. ಮುಂದೊಂದು ದಿನ ಮೈನಸ್ ವನ್ ಕೂಡಾ ನಮ್ಮತ್ತ ಬರಬಹುದು. ನಾನು ಸದಾ ಆಶಾವಾದಿ; ಅವಾಸ್ತವವಾದಿಯಲ್ಲ. ಅವರಿಗೆ ಮನೋಸ್ಥಿತಿಯ ಸಮಸ್ಯೆ ಇದ್ದು ಅದರಿಂದ ಹೊರಬರಬೇಕು" ಎಂದು ಪ್ರತಿಪಾದಿಸಿದರು.
"ಒಂದು ಕ್ಷಣ ನೀವು ಕಾಶ್ಮೀರವನ್ನು ಪಕ್ಕಕ್ಕೆ ಇಡಿ. ಇಂದು ಬೇರೆ ಎಲ್ಲರ ನಡುವೆ ವ್ಯಾಪಾರ, ವಹಿವಾಟು, ಸಂಪರ್ಕ ಮತ್ತು ಸಂಬಂಧಗಳು ಹೆಚ್ಚುತ್ತಿವೆ. ಖಚಿತವಾಗಿಯೂ ಒಂದು ಹಂತದಲ್ಲಿ, ಅದು ಪರಿಣಾಮ ಬೀರುತ್ತದೆ. ಏಕೆಂದರೆ ಈ ಸಹಕಾರದೊಂದಿಗೆ ಪ್ರತಿಯೊಬ್ಬರೂ ಪ್ರಗತಿಯಾಗುವುದನ್ನು ನೀವು ಕಾಣುತ್ತೀರಿ" ಎಂದು ಪಾಕಿಸ್ತಾನಕ್ಕೆ ಚುಚ್ಚಿದರು.
ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷ ಬೋರ್ಜ್ ಬ್ರೆಂಡ್ ಜತೆಗಿನ ಸಂವಾದದ ವೇಳೆ ಜೈಶಂಕರ್, ಒಂದನ್ನು ಹೊರತುಪಡಿಸಿ ನೆರೆರಾಷ್ಟ್ರಗಳ ಜತೆಗಿನ ಸಂಬಂಧದ ಬಗ್ಗೆ ಹೇಳಲು ಭಾರತಕ್ಕೆ ಒಳ್ಳೆಯ ಕಥೆ ಇದೆ ಎಂದು ಬಣ್ಣಿಸಿದರು. ನೆರೆದೇಶಗಳ ಬಗೆಗಿನ ನೀತಿಯನ್ನು ವಿವರಿಸಿದ ಅವರು, "ಭಾರತೀಯ ಉಪಖಂಡವು ಕನಿಷ್ಠ ಪ್ರಾದೇಶಿಕತೆಯ ಆರ್ಥಿಕತೆ. ಈ ಬಗ್ಗೆ ಏನಾದರೂ ಮಾಡಬೇಕು ಎನ್ನುವುದು ಮೋದಿಯವರ ಯೋಚನೆ. ಭಾರತೀಯ ಆರ್ಥಿಕತೆ ಇದನ್ನು ಮೇಲೆತ್ತುವ ಅಲೆ" ಎಂದರು.