ಆರೆ ಕಾಲನಿಯಲ್ಲಿ ಮರ ಕಡಿಯುವುದನ್ನು ವಿರೋಧಿಸಿದ 29 ಹೋರಾಟಗಾರರ ಬಂಧನ
ಮುಂಬೈ, ಅ.5: ಮೆಟ್ರೋ ಲೈನ್ ಗಾಗಿ ಕಾರು ಶೆಡ್ ನಿರ್ಮಾಣ ಯೋಜನೆಗಾಗಿ ಮುಂಬೈಯ ಆರೆ ಕಾಲನಿಯಲ್ಲಿ ಪರಿಸರ ಪ್ರಿಯರ ವಿರೋಧದ ನಡುವೆಯೂ ಮರ ಕಡಿಯುವ ಪ್ರಕ್ರಿಯೆಯ ವಿರುದ್ಧ ಪ್ರತಿಭಟಿಸಿದ 29 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ತರುವಾಯ ಮರಗಳನ್ನು ಕಡಿಯುವ ಕಾರ್ಯವನ್ನು ಮುಂಬೈ ಮೆಟ್ರೋ ರೈಲ್ ಕಾರ್ಪೊರೇಶನ್ ಮುಂಬೈ ಪೊಲೀಸರ ಮತ್ತೆ ಮುಂದುವರಿಸಿದೆ. ಈತನ್ಮಧ್ಯೆ ಈ ಪ್ರದೇಶದಲ್ಲಿ ಸೆಕ್ಷನ್ 144 ಅನ್ವಯ ಪ್ರತಿಬಂಧಕಾಜ್ಞೆಯನ್ನೂ ಹೇರಲಾಗಿದೆ.
ಸುಮಾರು 100ರಿಂದ 200ರಷ್ಟು ಮಂದಿಯಿದ್ದ ಪರಿಸರ ಕಾರ್ಯಕರ್ತರು ಪೊಲೀಸರೊಂದಿಗೆ ಕಳೆದ ರಾತ್ರಿ ಜಟಾಪಟಿಗಿಳಿದ ಕಾರಣ 29 ಮಂದಿಯನ್ನು ಬಂಧಿಸಿ ಐಪಿಸಿಯ ವಿವಿಧ ಸೆಕ್ಷನ್ನುಗಳನ್ವಯ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಮದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಬೇಕಾಯಿತು.
ಈ ಪ್ರದೇಶದಲ್ಲಿನ 2646 ಮರಗಳನ್ನು ಕಡಿಯುವ ನಿಟ್ಟಿನಲ್ಲಿ ಬಾಂಬೆ ಹೈಕೋರ್ಟ್ ಎಂಎಂಆರ್ಸಿ ಪರ ತೀರ್ಪು ನೀಡುತ್ತಿದ್ದಂತೆಯೇ ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್ನಿನ ಮರಗಳ ಪ್ರಾಧಿಕಾರ ರಾತ್ರೋರಾತ್ರಿ ಮರಗಳನ್ನು ಕಡಿಯಲು ಮುಂದಾದಾಗ ಭಾರೀ ಆಕ್ರೋಶ ಹಾಗೂ ಪ್ರತಿಬಟನೆಗಳಿಗೆ ಕಾರಣವಾಯಿತು.
ಶನಿವಾರ ಬೆಳಗ್ಗೆಯಿಂದ ಆರೆ ಪ್ರದೇಶಕ್ಕೆ ಸಾಗುವ ಎಲ್ಲಾ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ. ಇದರಿಂದಾಗಿ ಜೋಗೇಶ್ವರಿ-ವಿಕ್ರೋಲಿ ಲಿಂಕ್ ರಸ್ತೆ ಹಾಗೂ ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೇಯಲ್ಲಿ ಭಾರೀ ವಾಹನ ಸಂದಣಿ ಕಂಡು ಬಂದಿದೆ.