ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲೇ ಇಲ್ಲ: ಮಾಜಿ ಸಿಎಂ ಸಿದ್ದಾರಾಮಯ್ಯ
"ಅತಿವೃಷ್ಟಿ ಪರಿಹಾರ ಕೇಳಿದರೆ ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ"
![ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲೇ ಇಲ್ಲ: ಮಾಜಿ ಸಿಎಂ ಸಿದ್ದಾರಾಮಯ್ಯ ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲೇ ಇಲ್ಲ: ಮಾಜಿ ಸಿಎಂ ಸಿದ್ದಾರಾಮಯ್ಯ](https://www.varthabharati.in/sites/default/files/images/articles/2019/10/5/213454-1570291970.jpg)
ಚಿಕ್ಕಮಗಳೂರು, ಅ.4: ಅತಿವೃಷ್ಟಿಯಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರದ ಬಳಿ 38 ಸಾವಿರ ಕೋಟಿ ರೂ. ನೆರವು ಕೇಳಲಾಗಿತ್ತು. ಆದರೆ ಕೇಂದ್ರದ ಬಿಜೆಪಿ ಸರಕಾರ ಸದ್ಯ ನೀಡಿರುವ ಪರಿಹಾರಧನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಟೀಕಿಸಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಎಸ್.ಕೆ.ಮೇಗಲ್ ಗ್ರಾಮದಲ್ಲಿ ಅತಿವೃಷ್ಟಿ ಪರಿಹಾರ ಸಿಗದೇ ನೊಂದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಚಂದ್ರೇಗೌಡ ಕುಟುಂಬಕ್ಕೆ ಸಾಂತ್ವಾನ ಹೇಳಲು ಹಾಗೂ ಅತಿವೃಷ್ಟ ಹಾನಿ ವೀಕ್ಷಣೆಗೆ ಬುಧವಾರ ಭೇಟಿ ನೀಡಿದ್ದ ಅವರು ಚಂದ್ರೇಗೌಡ ಕುಟುಂಬವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಾದವರ ಪೈಕಿ ಗಂಜಿ ಕೇಂದ್ರದಲ್ಲಿದ್ದವರಿಗೆ ಮಾತ್ರ ಸರಕಾರ 10 ಸಾವಿರ ರೂ. ಪರಿಹಾರ ನೀಡಿದೆ. ಆದರೆ ಜಮೀನು, ಬೆಳೆ, ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ. ಕಳಸ ಭಾಗದಲ್ಲಿ ಪರಿಹಾರ ಸಿಗದೇ ಇತ್ತೀಚೆಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಚೆನ್ನಪ್ಪಗೌಡ ಕುಟುಂಬಕ್ಕೆ ಸಿಎಂ 5 ಲಕ್ಷ ರೂ, ಪರಿಹಾರ ಘೋಷಿಸಿದ್ದಾರೆ. ಆದರೆ ಇಂದಿಗೂ ಅವರಿಗೆ ಪರಿಹಾರ ಧನ ತಲುಪಿಲ್ಲ ಎಂದು ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ ಅವರು, ಸಿಎಂ ಯಡಿಯೂರಪ್ಪ ಸೇರಿದಂತೆ ಸರಕಾರದ ಸಚಿವರು ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲೇ ಇಲ್ಲ ಎಂದು ಅನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಸಿಎಲ್ಪಿ ಲೀಡರ್ ಆಗಿದ್ದೇನೆ, ಮಾಜಿ ಮುಖ್ಯಮಂತ್ರಿಯೂ ಆಗಿದ್ದೇನೆ. ಅತಿವೃಷ್ಟಿ ಹಾನಿಯ ಪ್ರದೇಶಗಳ ವೀಕ್ಷಣೆಗೆ ಇಲ್ಲಿಗೆ ಬಂದಿದ್ದೇನೆ. ಆದರೆ ಸ್ಥಳದಲ್ಲಿ ಯಾವ ಸರಕಾರಿ ಅಧಿಕಾರಿಗಳೂ ಇಲ್ಲ, ತಹಶೀಲ್ದಾರ್ ಕೂಡ ಬಂದಿಲ್ಲ. ರೆವಿನ್ಯೂ ಇನ್ಸ್ಪೆಕ್ಟರ್ ಓರ್ವ ಮುಖ ತೋರಿಸಿ ಹಾಗೆಯೇ ಹೋಗಿದ್ದಾನೆ. ಅತಿವೃಷ್ಟಿ ಪರಿಶೀಲನೆಗೆ ಬಂದಿದ್ದರೂ ಯಾವೊಬ್ಬ ಅಧಿಕಾರಿಯೂ ಇಲ್ಲ ಎಂದರೆ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಇದೆಯೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಮಾತಿನ ಮಧ್ಯೆ ಮಾಜಿ ಸಿಎಂ ತನ್ನ ಜೊತೆಗಿದ್ದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಬಳಿ 'ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರು ಯಾರೆಂದು' ಕೇಳಿ ವ್ಯಂಗ್ಯವಾಡಿ, ಆತ್ಮಹತ್ಯೆ ಮಾಡಿಕೊಂಡವರ ಕುಟುಂಬದವರನ್ನೂ ಉಸ್ತುವಾರಿ ಸಚಿವ ಸಿ.ಟಿ.ರವಿ ಭೇಟಿ ಮಾಡಿಲ್ಲ. ಆತ್ಮಹತ್ಯೆ ಮಾಡಿಕೊಂಡು ಕಣ್ಣೀರಿಡುತ್ತಿರುವ ಕುಟುಂಬಕ್ಕೆ ಸಾಂತ್ವಾನ ಹೇಳುವ, ಪರಿಹಾರ ಒದಗಿಸುವಂತಹ ಕೆಲಸವನ್ನು ರವಿ ಮಾಡಬೇಕಿತ್ತು, ಇದಕ್ಕಿಂತ ಒಳ್ಳೆಯ ಕೆಲಸ ಬೇರೆ ಏನಿದೆ ಅವನಿಗೆ ಎಂದು ಸಿ.ಟಿ.ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಬುಧವಾರ ಆತ್ಮಹತ್ಯೆ ಮಾಡಿಕೊಂಡ ರೈತ ಚಂದ್ರೇಗೌಡ ಅವರ ಮನೆಗೆ ಭೇಟಿ ನೀಡದೇ ರೈತ ಸಮುದಾಯವನ್ನು ಅವಮಾನಿಸಿದ್ದಾರೆ. ಜನರು ರೈತರು, ಗ್ರಾಮೀಣ ಜನರೊಂದಿಗೆ ಇರುವವರಿಗೆ ಓಟು ಹಾಕುವುದಿಲ್ಲ. ಜನ ಇಂತವರಿಗೆ ಮಾತ್ರ ಓಟು ಹಾಕಿ, ಹಳ್ಳಿಗಳಿಗೆ ಹೋಗದವರಿಗೆ ಅಧಿಕಾರ ನೀಡುತ್ತಾರೆ. ಅವರು ಅಧಿಕಾರ ಪಡೆದ ನಂತರ ರೈತರು, ಗ್ರಾಮೀಣ ಜನರನ್ನು ಅವರು ಮರೆಯುತ್ತಿದ್ದಾರೆ. ಇದು ನಿಮ್ಮೆಲ್ಲರ ದುರ್ದೈವ ಎಂದು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರನ್ನು ಭೇಟಿ ಮಾಡದ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ರಾಜ್ಯ ಬಿಜೆಪಿಯವರಲ್ಲಿ ಪರಿಹಾರ ಯಾವಾಗ ಕೊಡ್ತೀರಿ ಎಂದು ಕೇಳಿದರೆ, ನಾಳೆ, ನಾಡಿದ್ದು ಎನ್ನುತ್ತಾ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇಂತಹ ಲಜ್ಜೆಗೆಟ್ಟ ಸರಕಾರವನ್ನು ಕಿತ್ತೊಗೆಯಬೇಕೆಂದರು.
ಇದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಕಳಸದ ಎಸ್.ಕೆ.ಮೇಗಲ್ ಗ್ರಾಮದಲ್ಲಿ ಬುಧವಾರ ವಿಸ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ ಚಂದ್ರೇಗೌಡ ಹಾಗೂ ಕಳದ ಒಂದು ತಿಂಗಳ ಹಿಂದೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಳಸ ಹೋಬಳಿಯ ರೈತ ಚೆನ್ನಪ್ಪಗೌಡ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಲ್ಲದೇ ಅತಿವಾಋಷ್ಟಿಯಿಂದ ಹಾನಿಯಾದ ಜಮೀನಿನ ಮಾಹಿತಿ ಪಡೆದು ಶೀಘ್ರ ಅಗತ್ಯವಿರುವ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸುವುದಾಗಿನ ಭರವಸೆ ನೀಡಿದರು.
ಈ ವೇಳೆ ಶೃಂಗೇರಿ ಶಾಸಕ ರಾಜೇಗೌಡ, ಜಿಪಂ ಸದಸ್ಯ ಪ್ರಭಾಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಸ್ಥಳೀಯ ಮುಖಂಡರಾದ ಶ್ರೀನಿವಾಸ್ ಹೆಬ್ಬಾರ್, ಎಂ.ಎನ್.ಹರ್ಷ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.