ಐಎಸ್ಪಿಆರ್ ಎಲ್ ಕಚ್ಛ ತೈಲಾ ಘಟಕ: ಸಂತ್ರಸ್ಥರ ಸಮಸ್ಯೆ ಆಲಿಸಿದ ಸಂಸದೆ

ಕಾಪು : ಐಎಸ್ಪಿಆರ್ ಎಲ್ ಕಚ್ಛ ತೈಲಾ ಘಟಕದಿಂದ ಪಾದೂರು ಸುತ್ತಮುತ್ತಲಿನ ಪರಿಸರಕ್ಕೆ ಈಗಾಗಲೇ ತೊಂದರೆ ಆದ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಶನಿವಾರ ಪಾದೂರು ತೈಲ ಸಂಗ್ರಹಣಾ ಘಟಕ ಐಎಸ್ಪಿಆರ್ಎಲ್ ಘಟಕದ ಎರಡನೇ ಹಂತದ ಕಾಮಗಾರಿ ಹಾಗೂ ಮೊದಲ ಹಂತದ ಕಾಮಗಾರಿಯಿಂದ ಸಂತ್ರಸ್ಥರಾದವರ ಅಹವಾಲನ್ನು ಸ್ವೀಕರಿಸಿದ ಬಳಿಕ ಮಾತನಾಡಿದರು.
ಐಎಸ್ಪಿಆರ್ ಎಲ್ ಕಚ್ಛಾ ತೈಲ ಘಟಕದಿಂದ ಪಾದೂರು ಸುತ್ತಮುತ್ತಲಿನ ಪರಿಸರಕ್ಕೆ ಈಗಾಗಲೇ ತೊಂದರೆ ಆಗಿದೆ. ಅವರು ಪರಿಹಾರ ನೀಡುವಲ್ಲಿ ವಿಳಂಬ ಹಾಗೂ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ. ನವೆಂಬರ್ 15 ರನಂತರ ಲೋಕಸಭಾ ಅಧಿವೇಶನದಲ್ಲಿ ಪ್ರಾರಂಭವಾಗುತ್ತದೆ. ಸಂತ್ರಸ್ಥರು ಒಂದು ನಿಯೋಗದೊಂದಿಗೆ ದೆಹಲಿಗೆ ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರು ಸೇರಿ ಅಹವಾಲು ಮಂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಂದು ವೇಳೆ ನಮಗೆ ಅನ್ಯಾಯವಾದಲ್ಲಿ ನಿಮ್ಮ ಜೊತೆ ಸೇರಿ ನಾನೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವೆ. ಕೇಂದ್ರ ಸರ್ಕಾರದ ಆದೇಶದಂತೆ 1ರಲ್ಲಿ 4 ಅನುಪಾತದಂತೆ ಪರಿಹಾರ ಸಿಗಬೇಕು. ಮನೆ ಕಳೆದು ಕೊಂಡವರಿಗೆ ಪ್ರತ್ಯೇಕ ಲೇ ಔಟ್ ರಚನೆಯಾಗಬೇಕು. ಆಸುಪಾಸಿನ ಪುರಾತನ ಶೃದ್ಧಾಕೇಂದ್ರಗಳನ್ನು ಉಳಿಸಿಕೊಂಡು ಕಾಮಗಾರಿ ಯಾಗಬೇಕು. ಇದರ ಬಗ್ಗೆ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಮಾತನಾಡಿ ಪರಿಹಾರ ಸಿಗುವಂತೆ ಮಾಡುವೆ ಎಂದರು.
ಪಾದೂರು ಜನಜಾಗೃತಿ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ಮಾತನಾಡಿ, ಪ್ರಥಮ ಹಂತದಲ್ಲಿ 180 ಎಕ್ರೆ ಜಮೀನು ಪಡಕೊಂಡ ಐಎಸ್ಪಿಆರ್ ಎಲ್ ತೋಕೂರು ಪಾದೂರು ಪೈಪ್ಲೈನ್ ಕಾಮಗಾರಿ ಸಂದರ್ಭ ಹಾನಿಗೀಡಾದ 47 ಮನೆಗಳಿಗೆ 48 ಲಕ್ಷ ಪರಿಹಾರ ಸಿಕ್ಕಿದೆ. ಪಾದೂರು ಕಳತ್ತೂರಿನಲ್ಲಿ ಹಾನಿಗೊಳಪಟ್ಟ ಸಂತ್ರಸ್ಥರಿಗೆ ಪರಿಹಾರ ಸಿಕ್ಕಿಲ್ಲ. 120 ಮನೆಗಳಿಗೆ ಒಂದು ಕೋಟಿ ಆರು ಲಕ್ಷ ಪರಿಹಾರ ತಹಶೀಲ್ಧಾರರು ಮಂಜೂರು ಮಾಡಿದ್ದಾರೆ. ಆದರೆ ತೈಲ ಘಟಕದವರು ಪರಿಹಾರ ಕೊಡಲು ನಿರಾಕರಿಸಿದ್ದಾರೆ ಎಂದರು.
ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಜಿ ಸುವರ್ಣ, ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕುತ್ಯಾರು ಪಂಚಾಯತ್ ಅಧ್ಯಕ್ಷ ಧೀರಜ್ ಶೆಟ್ಟಿ, ಮಜೂರು ಪಂಚಾಯತ್ ಅಧ್ಯಕ್ಷ ಸಂದೀಪ್, ಪ್ರಕಾಶ್ ಶೆಟ್ಟಿ ಪದೆಬೆಟ್ಟು, ಗುರ್ಮೆ ಸುರೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.







