ಪ್ರವಾಹ ಪೀಡಿತ ಬಿಹಾರದಲ್ಲಿ ದೋಸ್ತಿ ಪಕ್ಷಗಳ ಕುಸ್ತಿ
ಪಾಟ್ನಾ, ಅ.6: ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಸಮರ್ಥರಾಗಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟೀಕಿಸಿದ ಬೆನ್ನಲ್ಲೇ, ನಿತೀಶ್ ಅವರನ್ನು ಟೀಕಿಸುವ ಅರ್ಹತೆ ಅವರಿಗೆ ಇಲ್ಲ ಎಂದು ಎನ್ಡಿಎ ಮಿತ್ರಪಕ್ಷವಾದ ಸಂಯುಕ್ತ ಜನತಾದಳ ತಿರುಗೇಟು ನೀಡಿದೆ.
"ನಿತೀಶ್ ಕುಮಾರ್ ಅವರ ಪಾದದ ಧೂಳಿಗೂ ಗಿರಿರಾಜ್ ಸಿಂಗ್ ಅವರನ್ನು ಹೋಲಿಸಲಾಗದು. ಪದೇ ಪದೇ ಮಹದೇವನ ಹೆಸರು ಹೇಳಿದ ಮಾತ್ರಕ್ಕೆ ಯಾರೂ ನಾಯಕನಾಗಲಾರರು" ಎಂದು ಪಕ್ಷದ ವಕ್ತಾರ ಸಂಜಯ್ ಸಿಂಗ್ ಹೇಳಿದ್ದಾರೆ.
ಗಿರಿರಾಜ್ ಸಿಂಗ್ ಅವರು ಬಿಹಾರದಲ್ಲಿ ಆಡಳಿತಾರೂಢ ಜೆಡಿಯು- ಬಿಜೆಪಿ ಸರ್ಕಾರವನ್ನು ಪದೇಪದೇ ಟೀಕಿಸುತ್ತಿದ್ದರೂ, ಶುಕ್ರವಾರ ಸಿಎಂ ಅವರನ್ನು ಅಸಮರ್ಥ ಎಂದು ಕರೆದಿರುವುದು ಜೆಡಿಯು ಮುಖಂಡರನ್ನು ಕೆರಳಿಸಿದೆ. "ಒಬ್ಬ ನಾಯಕ ಹೊಗಳಿಕೆ- ತೆಗಳಿಕೆ ಎರಡನ್ನೂ ಒಪ್ಪಿಕೊಳ್ಳಬೇಕು. ಪಾಟ್ನಾ ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಹಾಗೂ ಸುಶೀಲ್ ಮೋದಿ ಇಬ್ಬರೂ ಸಮಾನ ಹೊಣೆಗಾರರು" ಎಂದು ಸಂಜಯ್ ಸಿಂಗ್ ಅಭಿಪ್ರಾಯಪಟ್ಟರು.
‘‘ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸರಕಾರದ ಮಾಡಿಕೊಂಡ ಬಳಿಕ ನಗರಾಭಿವೃದ್ಧಿ ಖಾತೆ ಬಿಜೆಪಿ ಬಳಿಯಿದೆ. ಪಾಟ್ನಾ ನಗರದ ಮೇಯರ್ ಬಿಜೆಪಿ ಪಕ್ಷದವರು. ನಗರದ ವ್ಯಾಪ್ತಿಯ ಎರಡು ಜಿಲ್ಲೆಯಲ್ಲಿನ ಸಂಸದರು ಬಿಜೆಪಿಯವರು. ನಗರದ ಎಲ್ಲ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಕೈಯಲ್ಲಿದೆ. ಹೀಗಾಗಿ ಪಾಟ್ನಾ ಪ್ರವಾಹದಿಂದ ಉಂಟಾಗಿರುವ ಬಿಕ್ಕಟ್ಟಿನ ಹಿಂದೆ ಬಿಜೆಪಿಯ ಪಾಲು ದೊಡ್ಡದಿದೆ’’ ಎಂದು ಜೆಡಿಯುನ ಇನ್ನೋರ್ವ ವಕ್ತಾರ ರಾಜೀವ್ ರಂಜನ್ ಪ್ರಸಾದ್ ತಿರುಗೇಟು ನೀಡಿದ್ದಾರೆ.