ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾರನ್ನು ಭೇಟಿಯಾದ ಎನ್ಸಿ ನಿಯೋಗ
ಶ್ರೀನಗರ, ಅ. 6: ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮೊದಲ ಪ್ರಮುಖ ರಾಜಕೀಯ ಬೆಳವಣಿಗೆಯಾಗಿ ನ್ಯಾಷನಲ್ ಕಾನ್ಫರೆನ್ಸ್ನ 15 ಸದಸ್ಯರ ನಿಯೋಗ ರವಿವಾರ ಪಕ್ಷದ ಬಂಧಿತ ನಾಯಕರಾದ ಫಾರೂಕ್ ಅಬ್ದುಲ್ಲಾ ಹಾಗೂ ಒಮರ್ ಅಬ್ದುಲ್ಲಾ ಅವರನ್ನು ರವಿವಾರ ಭೇಟಿಯಾಗಿದೆ.
ಇಬ್ಬರು ನಾಯಕರೊಂದಿಗೆ ನಿಯೋಗ ನಡೆಸಿದ ಪ್ರತ್ಯೇಕ ಮಾತುಕತೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಹಾಗೂ ಮುಂಬರುವ ಸ್ಥಳೀಯಾಡಳಿತ ಚುನಾವಣೆ ಬಗ್ಗೆ ಚರ್ಚೆ ನಡೆಸಿತು. ನಾಯಕರನ್ನು ಭೇಟಿಯಾಗಲು ನಿಯೋಗಕ್ಕೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅನುಮತಿ ನೀಡಿದ್ದರು.
ನ್ಯಾಶನಲ್ ಕಾನ್ಫರೆನ್ಸ್ನ ಜಮ್ಮು ಪ್ರಾಂತೀಯ ವರಿಷ್ಠ ದೇವಿಂದರ್ ಸಿಂಗ್ ರಾಣಾ ನೇತೃತ್ವದ ನಿಯೋಗ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ 30 ನಿಮಿಷಗಳ ಕಾಲ ಮಾತುಕತೆ ನಡೆಸಿತು. ಅನಂತರ ನಿಯೋಗ ಫಾರೂಕ್ ಅಬ್ದುಲ್ಲಾ ಅವರ ನಿವಾಸಕ್ಕೆ ತೆರಳಿತು.
ಇಬ್ಬರು ನಾಯಕರ ಭೇಟಿಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ರಾಣಾ, ಯಾವುದೇ ರಾಜಕೀಯ ಪ್ರಕ್ರಿಯೆ ಆರಂಭಿಸಲು ಪಕ್ಷದ ನಾಯಕರನ್ನು ಬಿಡುಗಡೆ ಮಾಡಬೇಕಾಗಿದೆ ಎಂದರು.
ಅವರಿಬ್ಬರು ಚೆನ್ನಾಗಿ ಹಾಗೂ ಉತ್ತಮವಾಗಿದ್ದಾರೆ. ಆದರೆ, ರಾಜ್ಯದ ಬೆಳವಣಿಗೆ ಬಗ್ಗೆ ಮುಖ್ಯವಾಗಿ ನಿರ್ಬಂಧದ ಬಗ್ಗೆ ದುಃಖಿತರಾಗಿದ್ದಾರೆ ಎಂದು ರಾಣಾ ಹೇಳಿದರು.
ಮುಂಬರುವ ಬ್ಲಾಕ್ ಅಭಿವೃದ್ಧಿ ಮಂಡಳಿ ಚುನಾವಣೆ ಬಗ್ಗೆ ಪ್ರಶ್ನಿಸಿದಾಗ ರಾಣ, ರಾಜ್ಯದಲ್ಲಿ ಯಾವುದೇ ರಾಜಕೀಯ ಪ್ರಕ್ರಿಯೆ ಆರಂಭವಾಗಬೇಕಾದರೆ, ಮುಖ್ಯ ವಾಹಿನಿಯ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಬೇಕು ಎಂದರು.
ಜಮ್ಮು ಹಾಗೂ ಕಾಶ್ಮೀರದಲ್ಲಿ ಆಗಸ್ಟ್ 5ರಂದು ವಿಧಿ 370 ರದ್ದುಗೊಳಿಸಿದ ಬಳಿಕ ಸುಮಾರು 500 ನಾಯಕರು ಹಾಗೂ ಹೋರಾಟಗಾರರನ್ನು ಬಂಧನದಲ್ಲಿ ಇರಿಸಲಾಗಿದೆ. ಪರಿಶೀಲನೆ ನಡೆಸಿದ ಬಳಿಕ ಕಾಶ್ಮೀರದಲ್ಲಿ ಬಂಧನದಲ್ಲಿ ಇರಿಸಲಾಗಿರುವ ಪ್ರತಿಯೊಬ್ಬ ರಾಜಕೀಯ ನಾಯಕರು ಹಾಗೂ ಹೋರಾಟಗಾರರನ್ನು ಬಿಡುಗಡೆ ಮಾಡಲಾಗುವುದು ಎಂದು ಜಮ್ಮು ಕಾಶ್ಮೀರ ಜಿಲ್ಲಾಡಳಿತ ಹೇಳಿತ್ತು.