ಅಖಿಲ ಭಾರತ ಅಂತರ್ ವಿವಿ ಪುರುಷರ ಕ್ರಾಸ್ಕಂಟ್ರಿ ಕೂಟ: ಮಂಗಳೂರು ವಿವಿ ಚಾಂಪಿಯನ್

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ಕ್ರಾಸ್ಕಂಟ್ರಿ ಕೂಟದಲ್ಲಿ ಮಂಗಳೂರು ವಿವಿಯು 30 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ಶಿಫ್ನ್ನು ಪಡೆಯುವ ಮೂಲಕ ಸತತ ಐದನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಮುಡುಗೇರಿಸಿಕೊಂಡಿದೆ.
ಪಂಜಾಬಿ ವಿವಿ ಪಟಿಯಾಲ 53 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಸಾವಿತ್ರಿಬಾಯಿಪುಲೆ, ಪುಣೆ ಯುನಿವರ್ಸಿಟಿ 62 ಅಂಕಗಳೊಂದಿಗೆ ತೃತೀಯ ಸ್ಥಾನ, ಸಂತಬಾಬಾ ಬಾಗ್ ಸಿಂಗ್ ವಿವಿ 85 ಅಂಕಗಳೊಂದಿಗೆ ನಾಲ್ಕನೇ ಸ್ಥಾನ, ಮಹರ್ಷಿ ದಯಾನಂದ ವಿವಿ 136 ಅಂಕ ಗಳೊಂದಿಗೆ ಐದನೇ ಸ್ಥಾನವನ್ನು ಪಡೆದುಕೊಂಡಿದೆ.
ಬೆಳಗ್ಗೆ ಮೂಡುಬಿದಿರೆಯ ನಿಶ್ಮಿತಾ ಟವರ್ಸ್ ಬಳಿಯಿಂದ 10 ಕಿ.ಮೀ. ಸ್ಪರ್ಧೆಯು ಆರಂಭಗೊಂಡಿದ್ದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಐ.ಪಿ.ಎಸ್ ಕ್ರೀಡಾಕೂಟಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆಯನ್ನು ನೀಡಿದರು. ನಂತರ ಮಾತನಾಡಡಿದ ಅವರು ಇಲ್ಲಿ ಸೇರಿರುವ ಯುವ ಕ್ರೀಡಾಪಟುಗಳೇ ದೇಶದ ಭವಿಷ್ಯವನ್ನು ರೂಪಿಸುವವರು ಎಂದರು.
ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳೂರು ವಿವಿ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ವಿಜೇತರಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿ ಆಳ್ವಾಸ್ ಶಿಕ್ಷಣ ಸಂಸ್ಥೆಯಂತಹ ಮಾದರಿ ಶಿಕ್ಷಣ ಸಂಸ್ಥೆಯನ್ನು ಮಂಗಳೂರು ವಿವಿ ಹೊಂದಿರುವುದು ಹೆಮ್ಮೆಯ ವಿಚಾರ. ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಆಳ್ವಾಸ್ ಸಂಸ್ಥೆ ನಾಡಿನಲ್ಲೇ ಪ್ರಸಿದ್ಧಿ ಪಡೆದಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಪೂರ್ಣ ಬೆಂಬಲದೊಂದಿಗೆ ಮಂಗಳೂರು ವಿವಿಯು ಅಖಿಲ ಭಾರತೀಯ ಮಟ್ಟದ ಕ್ರಾಸ್ಕಂಟ್ರಿ ಕ್ರೀಡಾಕೂಟವನ್ನು ಮೂರನೇ ಬಾರಿಗೆ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದೆ ಎಂದರು.
ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ. ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ, ಅಂತಾರಾಷ್ಟ್ರೀಯ ಕ್ರೀಡಾಪಟು ಬಾಬು ಶೆಟ್ಟಿ, ಹಿರಿಯ ತರಬೇತುದಾರ ಹರ್ಪಾಲ್ ಸಿಂಗ್ ಮತ್ತು ಸಮಾಜ ಸೇವಕ ಪ್ರಸಾದ್ ರೈ ಉಪಸ್ಥಿತರಿದ್ದರು.
ಮಂಗಳೂರು ವಿವಿ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸ್ವಾಗತಿಸಿ, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ವಂದಿಸಿದರು. ದೈಹಿಕ ನಿರ್ದೇಶಕ ಪ್ರವೀಣ್ ವಿಜೇತರ ಪಟ್ಟಿ ವಾಚಿಸಿದರು, ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.
ಓಟವು ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿ, ಮಹಾವೀರ ಕಾಲೇಜು, ಜೈನ್ ಕಾಲೇಜು, ಅಲಂಗಾರ್ ಮಾರ್ಗವಾಗಿ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಓಟ ಸಮಾಪನಗೊಂಡಿತು.
ಮುಂದುವರಿದ ಮಾದರಿ ಕಾರ್ಯ
ಕ್ರೀಡಾಕೂಟದಲ್ಲಿ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಮಾದರಿ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಮೋಹನ್ ಆಳ್ವ ಈ ಬಾರಿಯೂ ಮುಂದುವರಿಸಿದ್ದಾರೆ. ಕಳೆದ ವರ್ಷ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ್ದ 79ನೇ ಅಖಿಲ ಭಾರತೀಯ ಅಂತರ್ ವಿವಿ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ನಗದು ಬಹುಮಾನ ನೀಡಿ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದ್ದರು.
50 ಸಾವಿರ ರೂ. ನಗದು ಬಹುಮಾನ
ಚಾಂಪಿಯನ್ ತಂಡಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 50 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗಿದೆ. ವೈಯುಕ್ತಿಕ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಸ್ಥಾನ ಪಡೆದ ಮಂಗಳೂರು ವಿವಿಯ ನರೇಂದ್ರ ಪ್ರತಾಪ್ (31.52 ನಿ.)ಗೆ ರೂ. 25 ಸಾವಿರ, ದ್ವಿತೀಯ ಸ್ಥಾನ ಪಡೆದ ಪಂಜಾಬ್ ಯುನಿವರ್ಸಿಟಿಯ ಪಟಿಯಾಲದ ಪಿಂಟು ಕುಮಾರ್ ಯಾದವ್(32.13 ನಿ)ಗೆ 20 ಸಾವಿರ, ತೃತೀಯ ಸ್ಥಾನಿ ಮದ್ರಾಸ್ ವಿವಿಯ ಸತೀಶ್ ಕುಮಾರ್ ಎಸ್.ಎಚ್.(32.22 ನಿ)ಗೆ 15 ಸಾವಿರ. ನಾಲ್ಕನೇ ಸ್ಥಾನ ಪಡೆದ ಮಂಗಳೂರು ವಿವಿಯ ಅಬ್ದುಲ್ ಬಾರಿ(32.30 ನಿ.)ಗೆ 10 ಸಾವಿರ, ಐದನೇ ಸ್ಥಾನ ಪಡೆದ ಕುಮಾನ್ ವಿವಿಂ ನೈನಿತಾಲ್ನ ಮೋಹನ್ ಸೈನಿ(32.49 ನಿ.)ಗೆ 5 ಸಾವಿರ, ಆರನೇ ಸ್ಥಾನ ಪಡೆದ ರಾಜೀವ್ ಗಾಂಧಿ ವಿವಿಯ ರೋಹಿತ್ ಯಾದವ್(32.58)ಗೆ 5 ಸಾವಿರ ನಗದು ಬಹುಮಾನ ನೀಡಲಾಯಿತು.








