ನವಭಾರತದ ಜೊತೆಗೆ ನವ ‘ರಾಷ್ಟ್ರಪಿತ’ ಕೂಡ ಹೊಮ್ಮಿದ್ದಾರೆ: ಗಾಂಧೀಜಿ ಮರಿಮೊಮ್ಮಗನ ಆಕ್ರೋಶ
ಕೇಸರಿ ಪಕ್ಷದ ಬಾಯಲ್ಲಿ ‘ಗಾಂಧಿ’, ಮನಸ್ಸಲ್ಲಿ ‘ಗೋಡ್ಸೆ’
ಔರಂಗಾಬಾದ್(ಮಹಾರಾಷ್ಟ್ರ),ಅ.6: ನವಭಾರತದ ಜೊತೆಗೆ ನವ ‘ರಾಷ್ಟ್ರಪಿತ ’ಕೂಡ ಹೊರಹೊಮ್ಮಿದ್ದಾರೆ ಎಂದು ಹೇಳಿರುವ ಮಹಾತ್ಮಾ ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಅವರು, ಆದರೆ ಮಹಾತ್ಮಾ ಎಂದಿಗೂ ಇಂತಹ ರಾಷ್ಟ್ರದ ಪಿತರಾಗುತ್ತಿರಲಿಲ್ಲ ಎಂದಿದ್ದಾರೆ.
ಮಧ್ಯಪ್ರದೇಶದ ರೇವಾದಲ್ಲಿ ಇತ್ತೀಚಿಗೆ ನಡೆದಿರುವ ಮಹಾತ್ಮಾರ ಚಿತಾಭಸ್ಮ ಕುಂಡದ ಕಳ್ಳತನ ಮತ್ತು ಅವರ ಪೋಸ್ಟ್ ನಲ್ಲಿ ಕಪ್ಪುಬಣ್ಣದಿಂದ ದೇಶದ್ರೋಹಿ ಎಂದು ಬರೆದಿದ್ದ ಘಟನೆಯನ್ನು ‘ಅಪಚಾರ’ ಎಂದು ಬಣ್ಣಿಸಿದ ಅವರು,ಈ ಬಗ್ಗೆ ಗಾಢಮೌನ ವಹಿಸಿರುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ತರಾಟೆಗೆತ್ತಿಕೊಂಡರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ತುಷಾರ್ ಗಾಂಧಿ,ಮಹಾತ್ಮಾ ಗಾಂಧಿಯವರ ಚಿತಾಭಸ್ಮ ಕುಂಡದ ಕಳ್ಳತನಕ್ಕಿಂತಲೂ ಸರಕಾರಗಳ ಮೌನ ಹೆಚ್ಚಿನ ನೋವನ್ನುಂಟು ಮಾಡಿದೆ ಎಂದರು.
ಈ ಘಟನೆಯು ಮಹಾತ್ಮಾರ ವರ್ಚಸ್ಸಿಗೆ ಕುಂದು ತರಲು ಇಂದು ಮತ್ತು ಕಳೆದ ಏಳು ದಶಕಗಳಿಂದ ಆಳುತ್ತಿರುವ ರಾಜಕೀಯ ಪಕ್ಷಗಳ ಪೂರ್ವಯೋಜಿತ ಕೃತ್ಯವಾಗಿದೆ ಎಂದು ಹೇಳಿದರು.
ಗಾಂಧೀಜಿಯವರ 150ನೇ ಜಯಂತಿ ಸಂದರ್ಭದಲ್ಲಿಯೇ ನಡೆದಿರುವ ಘಟನೆಯ ಕುರಿತು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳ ಮೌನ ಬಹಳಷ್ಟನ್ನು ಹೇಳುತ್ತಿದೆ. ಚಿತಾಭಸ್ಮ ಕುಂಡವನ್ನು ವಾಪಸ್ ಪಡೆದುಕೊಂಡು ಅದನ್ನು ವಿಸರ್ಜಿಸುವಂತೆ ತಾನು ಸರಕಾರವನ್ನು ಕೋರುತ್ತಿದ್ದೇನೆ. ಏಕೆಂದರೆ ಗಾಂಧೀಜಿಯವರ ಮರಿಮೊಮ್ಮಗನಾಗಿ ತನಗೆ ಮತ್ತು ಅವರ ತತ್ತ್ವವನ್ನು ಅನುಸರಿಸುತ್ತಿರುವವರಿಗೆ ಇದರಿಂದ ತುಂಬ ನೋವಾಗಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಸರಕಾರವು ಆವರಣವನ್ನು ತೆರವುಗೊಳಿಸುವಂತೆ ಅಹ್ಮದಾಬಾದ್ನ ಸಾಬರಮತಿ ಆಶ್ರಮದ ನಿವಾಸಿಗಳಿಗೆ ನೋಟಿಸ್ಗಳನ್ನು ಜಾರಿಗೊಳಿಸುತ್ತಿದೆ. ಅಲ್ಲಿ ಗಾಂಧೀಜಿಯವರ ಬೃಹತ್ ಸ್ಮಾರಕವನ್ನು ನಿರ್ಮಿಸಲಾಗುವುದು ಎಂಬ ಕಾರಣವನ್ನು ನೀಡಲಾಗುತ್ತಿದೆ. ಆದರೆ ಸಾಬರಮತಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ‘ಹೃದಯ ಕುಂಜ’(ಹಾಲಿ ಆಶ್ರಮ)ದ ಎದುರು ತಲೆ ಬಾಗಿ ನಮಿಸುತ್ತಿರುವಾಗ ನೂತನ ಸ್ಮಾರಕದ ಅಗತ್ಯವೇನಿದೆ ಎಂದು ಮರುಪ್ರಶ್ನಿಸಿದರು.