ಯೋಗಕ್ಕೆ ಪ್ರೇರಣೆ ನೀಡುವ ಶಕ್ತಿ ಈಗ ನಿರ್ಮಾಣವಾಗುತ್ತಿದೆ: ಸಂಸದ ನಳಿನ್ ಕುಮಾರ್

ಬಂಟ್ವಾಳ, ಅ. 6: ಯೋಗಕ್ಕೆ ಪ್ರೇರಣೆ ನೀಡುವ ಶಕ್ತಿ ಈಗ ನಿರ್ಮಾಣವಾಗುತ್ತಿದ್ದು, ಸ್ಪರ್ಧೆಯಿಂದ ಪ್ರತಿಭೆಗಳನ್ನು ಬೆಳೆಸಿದಂತಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರವಿವಾರ ಸಂಜೆ ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಮಂಗಳೂರು ಬಂಟ್ವಾಳ ಘಟಕ ವತಿಯಿಂದ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ವಿಶ್ವಮಾನ್ಯವಾಗಿರುವ ಯೋಗ ಭಾರತೀಯ ಪರಂಪರೆಯ ಸಾರವನ್ನು ತಿಳಿಸಿ ಹೇಳುವುದರ ಜೊತೆಗೆ ದೇಹ, ಮನಸ್ಸನ್ನು ಶಾಂತವಾಗಿಸಿ ನೈತಿಕತೆಯ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದು ನಳಿನ್ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಬಹುಮಾನ ವಿತರಿಸಿದ ಬಂಟ್ವಾಳ ಶಾಸಕ ರಾಜೇಶ್ ಯು.ನಾಯ್ಕ್ ಮಾತನಾಡಿ, ಯೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಇಂದು ದೂರವಾಗಿದ್ದು, ಜನಸಾಮಾನ್ಯನೂ ಇದರ ಬಗ್ಗೆ ಕುತೂಹಲ ಮೂಡಿಸುವಂತೆ ಮಾಡಲಾಗುವ ಪ್ರಕ್ರಿಯೆಗಳು ಇಂದು ನಡೆಯುತ್ತಿರುವುದು ಸಂತೋಷದಾಯಕ ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿ ದೇಶದ ಸನಾತನ ಮೌಲ್ಯಗಳಿಗೆ ಜಗತ್ತು ಗೌರವ ಕೊಡುತ್ತಿರುವುದಕ್ಕೆ ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿರುವುದೇ ಉದಾಹರಣೆ ಎಂದರು.
ಲಯನ್ಸ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ರಾಮನಗರ ನ್ಯಾಯಾಧೀಶೆ ಕಲ್ಪನಾ ಚಂದ್ರಶೇಖರ್, ಉದ್ಯಮಿಗಳಾದ ಸಂಜೀವ ಪೂಜಾರಿ ಗುರುಕೃಪಾ, ಭಾಸ್ಕರ ಶೆಟ್ಟಿ ಪುಣೆ, ಲೋಕನಾಥ ಶೆಟ್ಟಿ, ಶ್ರೀ ರಕ್ತೇಶ್ವರಿ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಎಲ್. ನಾಯಕ್, ಆಯುಷ್ ಜಿಲ್ಲಾಧ್ಯಕ್ಷ ಮಹಮ್ಮದ್ ಇಕ್ಬಾಲ್, ಯೋಗನಿಧಿ ಪತಂಜಲಿ ಪ್ರತಿಷ್ಠಾನ ಅಧ್ಯಕ್ಷ ಡಾ. ಶಿವಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಯೋಗಗುರು ಡಾ. ರಘುವೀರ ಅವಧಾನಿ, ಯೋಗಗುರು ಮೋನಪ್ಪ ಪೂಜಾರಿ, ಪ್ರತಿಷ್ಠಾನ ಗೌರವಾಧ್ಯಕ್ಷ ಸೇಸಪ್ಪ ಕೋಟ್ಯಾನ್, ಕೋಶಾಧಿಕಾರಿ ಡಾ. ಸುಬ್ರಹ್ಮಣ್ಯ ಟಿ, ಸಮಿತಿ ಸಂಚಾಲಕರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಪ್ರಸಾದ್ ಕುಮಾರ್, ಪ್ರತಿಭಾ ರೈ ಉಪಸ್ಥಿತರಿದ್ದರು. ಸುನೀತಾ, ಪ್ರತಿಭಾ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಚಂದ್ರಹಾಸ ಶೆಟ್ಟಿ ರಂಗೋಲಿ ಸ್ವಾಗತಿಸಿದರು. ದಾಮೋದರ ರಾಮಕುಂಜ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಕಾರ್ಯಕ್ರಮದ ಪೋಷಕರನ್ನು ಸಂಘಟಕರನ್ನು, ತೀರ್ಪುಗಾರರನ್ನು, ಸ್ವಯಂ ಸೇವಕರನ್ನು ಸನ್ಮಾನಿಸಲಾಯಿತು. 8 ವಿಭಾಗಗಳ ಮಹಿಳೆ ಮತ್ತು ಪುರುಷರಿಗೆ ಸ್ಪರ್ಧೆಗಳು ನಡೆದಿದ್ದು, ಬಹುಮಾನ ವಿತರಿಸಲಾಯಿತು.







