ಗುಂಪುಹತ್ಯೆ ಬಗ್ಗೆ ಪ್ರಧಾನಿಗೆ 49 ಗಣ್ಯರು ಬರೆದ ಪತ್ರಕ್ಕೆ ಸಾಂಸ್ಕೃತಿಕ ಕ್ಷೇತ್ರದ 185 ಕಲಾವಿದರ ಸಹಮತ
ಎಫ್ ಐಆರ್ ಗೆ ಖಂಡನೆ

ಹೊಸದಿಲ್ಲಿ, ಅ.7: ನಟ ನಾಸಿರುದ್ದೀನ್ ಶಾ, ನೃತ್ಯಗಾರ್ತಿ ಮಲ್ಲಿಕಾ ಸಾರಾಭಾಯ್, ಲೇಖಕರಾದ ಅಶೋಕ್ ವಾಜಪೇಯಿ, ನಯನತಾರ ಸೆಹಗಲ್ ಮತ್ತು ಶಶಿ ದೇಶಪಾಂಡೆ, ಇತಿಹಾಸಕಾರರಾದ ರೋಮಿಲಾ ಥಾಪರ್, ಗಾಯಕ ಟಿ.ಎಂ. ಕೃಷ್ಣ ಸೇರಿದಂತೆ ಸುಮಾರು 185 ಮಂದಿ ಕಲಾವಿದರು 49 ಗಣ್ಯರು ಗುಂಪು ಹತ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಈ 49 ಮಂದಿಯ ವಿರುದ್ಧ 'ದೇಶದ್ರೋಹ' ಆರೋಪದಲ್ಲಿ ಬಿಹಾರದ ಮುಝಫ್ಫರನಗರದಲ್ಲಿ ಎಫ್ ಐಆರ್ ದಾಖಲಿಸಿರುವುದನ್ನು ಖಂಡಿಸಿದ್ದಾರೆ.
"ಗೌರವಯುತ ಸಮಾಜದ ಸದಸ್ಯರಾಗಿ ಅವರ ಕರ್ತವ್ಯ ಪಾಲಿಸಿದ ಸಾಂಸ್ಕೃತಿಕ ಕ್ಷೇತ್ರದಲ್ಲಿರುವ ನಮ್ಮ 49 ಸಹೋದ್ಯೋಗಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ನಮ್ಮ ದೇಶದಲ್ಲಿ ನಡೆಯುತ್ತಿರುವ ಗುಂಪುಹತ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಅವರು ಪ್ರಧಾನಮಂತ್ರಿಯವರಿಗೆ ಬಹಿರಂಗ ಪತ್ರ ಬರೆದಿದ್ದರು. ಇದನ್ನು ದೇಶದ್ರೋಹವೆಂದು ಕರೆಯಬಹುದೇ?, ಅಥವಾ ಇದು ನಾಗರಿಕರ ಧ್ವನಿಯನ್ನು ಮೌನವಾಗಿಸಲು ನಡೆಸಿದ ಪ್ರಯತ್ನವೇ?, ಸಾಂಸ್ಕೃತಿಕ ಕ್ಷೇತ್ರದ ಸದಸ್ಯರಾದ ನಾವು, ಇಂತಹ ದೌರ್ಜನ್ಯಗಳನ್ನು ಖಂಡಿಸುತ್ತೇವೆ. ಪ್ರಧಾನ ಮಂತ್ರಿಯವರಿಗೆ ನಮ್ಮ ಸಹೋದ್ಯೋಗಿಗಳು ಬರೆದ ಪ್ರತಿಯೊಂದು ಶಬ್ಧಗಳಿಗೂ ನಮ್ಮ ಸಹಮತವಿದೆ. ಆದ್ದರಿಂದ ನಾವಿಲ್ಲಿ ಅವರು ಬರೆದ ಪತ್ರಗಳನ್ನು ಹಂಚಿಕೊಳ್ಳುತ್ತಿದ್ದೇವೆ ಮತ್ತು ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕಾನೂನು ಕ್ಷೇತ್ರಗಳು ಇದನ್ನು ಅನುಸರಿಸಬೇಕು ಎಂದು ವಿನಂತಿಸುತ್ತಿದ್ದೇವೆ" ಎಂದು 185 ಮಂದಿ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.







