ಹಿಂದಿ ಬಿಗ್ಬಾಸ್ ಶೋ ಪ್ರಸಾರವನ್ನು ರದ್ದುಮಾಡಿ: ಕೇಂದ್ರ ಸಚಿವರಿಗೆ ಬಿಜೆಪಿ ಶಾಸಕನ ಪತ್ರ
ಹೊಸದಿಲ್ಲಿ, ಅ.10: ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ‘ಬಿಗ್ ಬಾಸ್’ ಪ್ರಸಾರವನ್ನು ರದ್ದುಪಡಿಸುವಂತೆ ಗಾಝಿಯಾಬಾದ್ನ ಬಿಜೆಪಿ ಶಾಸಕ ನಂದ ಕಿಶೋರ್ ಗುಜ್ಜರ್ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಬಿಗ್ ಬಾಸ್ ಶೋ ಅಶ್ಲೀಲತೆಯನ್ನು ಪ್ರಚೋದಿಸುತ್ತಿದ್ದು, ಇದು ಕುಟುಂಬ ಸದಸ್ಯರು ವೀಕ್ಷಿಸಲು ಅನರ್ಹವಾದ ಕಾರ್ಯಕ್ರಮವಾಗಿದೆ. ಇದು ದೇಶದ ಸಂಸ್ಕೃತಿಗೆ ವಿರುದ್ಧವಾಗಿದೆ. ಇದರಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಲಾಗುತ್ತಿದೆ. ವಿವಿಧ ಸಮುದಾಯದ ಜೋಡಿಗಳನ್ನು ಒಂದೇ ಬೆಡ್ನಲ್ಲಿ ಮಲಗುವಂತೆ ಒತ್ತಾಯಿಸುವುದನ್ನು ಸಹಿಸಲಾಗುವುದಿಲ್ಲ’’ ಎಂದು ಕಿಶೋರ್ ಗುಜ್ಜರ್ ಪತ್ರದಲ್ಲಿ ತಿಳಿಸಿದ್ದಾರೆ.
‘‘ಒಂದೆಡೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಗತವೈಭವ ಮರುಕಳಿಸಲು ಯತ್ನಿಸುತ್ತಿದ್ದರೆ,ಮತ್ತೊಂದೆಡೆ ಇಂತಹ ಶೋಗಳು ದೇಶದ ಸಂಸ್ಕೃತಿಯನ್ನು ಕೆಣಕುತ್ತಿವೆ. ಭವಿಷ್ಯದಲ್ಲಿ ಇಂತಹ ಘಟನೆ ಪುನರಾವರ್ತಿಸದಂತೆ ತಡೆಯಲು ದೂರದರ್ಶನದಲ್ಲಿ ಪ್ರಸಾರವಾಗುವ ವಿಷಯಕ್ಕಾಗಿ ಸೆನ್ಸಾರ್ ಕಾರ್ಯವಿಧಾನದ ಅಗತ್ಯವಿದೆ ಎಂದು ಹೇಳಿದ್ದಾರೆ.