'ನಮ್ಮ ಹಣ ವಾಪಸ್ ನೀಡಿ': ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪಿಎಂಸಿ ಬ್ಯಾಂಕ್ ಗ್ರಾಹಕರ ಆಗ್ರಹ
ಬಿಜೆಪಿ ಕಚೇರಿ ಮುಂದೆ ಭಾರೀ ಪ್ರತಿಭಟನೆ
ಮುಂಬೈ, ಅ.10: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ನಾರಿಮನ್ ಪಾಯಿಂಟ್ ಕಟ್ಟಡದಲ್ಲಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆಂಬ ಮಾಹಿತಿ ಪಡೆದ ಪಿಎಂಸಿ ಬ್ಯಾಂಕ್ ನ ಗ್ರಾಹಕರು ಕಚೇರಿಯ ಹೊರಗೆ ಪ್ರತಿಭಟಿಸಿ ತಾವು ಬ್ಯಾಂಕಿನಲ್ಲಿ ಠೇವಣಿಯಿಟ್ಟಿರುವ ತಮ್ಮ ಹಣ ವಾಪಸ್ ನೀಡುವಂತೆ ಸರಕಾರವನ್ನು ಆಗ್ರಹಿಸಿದರು.
ಸರಕಾರ ಏನು ಬೇಕಾದರೂ ಮಾಡಲಿ. ಆದರೆ ನಾವು ಕಷ್ಟಪಟ್ಟು ಸಂಪಾದಿಸಿ ಠೇವಣಿಯಿರಿಸಿದ ಹಣ ವಾಪಸ್ ನೀಡಲಿ ಎಂದು ಬಿಜೆಪಿ ಕಚೇರಿ ಹೊರಗೆ ಸೇರಿದ್ದ ಹಲವು ಬ್ಯಾಂಕ್ ಗ್ರಾಹಕರು ಆಗ್ರಹಿಸಿದರು.
ಗ್ರಾಹಕರ ಜತೆ ಮಾತನಾಡಿ ಅವರ ಅಹವಾಲುಗಳನ್ನು ಆಲಿಸಿದ ಸಚಿವೆ ನಂತರ ಸುದ್ದಿಗೋಷ್ಠಿಯನ್ನುದ್ದೇಸಿಸಿ ಮಾತನಾಡಿ , ಪಿಎಂಸಿ ಬ್ಯಾಂಕ್ ವಿಚಾರದಲ್ಲಿ ರಿಸರ್ವ್ ಬ್ಯಾಂಕ್ ತೀರ್ಮಾನ ಕೈಗೊಳ್ಳಬೇಕಿದೆ. ಗ್ರಾಹಕರು ಬ್ಯಾಂಕ್ ನಿಂದ ವಿದ್ ಡ್ರಾ ಮಾಡಬಹುದಾದ ಹಣದ ಮಿತಿ ಕುರಿತಂತೆ ಇರುವ ದೂರುಗಳ ಬಗ್ಗೆ ವಿತ್ತ ಸಚಿವಾಲಯ ಹೆಚ್ಚಿಗೇನೂ ಮಾಡುವ ಹಾಗಿಲ್ಲ ಎಂದರು. ಅದೇ ಸಮಯ ಈ ಸಮಸ್ಯೆಯ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಸಚಿವಾಲಯಗಳೊಂದಿಗೆ ಕೈಜೋಡಿಸಿ ಪರಿಶೀಲಿಸುವಂತೆ ವಿತ್ತ ಸಚಿವಾಲಯದ ಕಾರ್ಯದರ್ಶಿಗಳಿಗೆ ತಿಳಿಸಿದ್ದಾಗಿ ಸಚಿವೆ ಹೇಳಿದರು.
ಗ್ರಾಹಕರ ಸಮಸ್ಯೆ ಪರಿಹಾರಕ್ಕೆ ತಮ್ಮಿಂದಾದಷಷ್ಟು ಪ್ರಯತ್ನಿಸುವುದಾಗಿ ಹಾಗೂ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಜತೆ ಮಾತನಾಡುವುದಾಗಿಯೂ ನಿರ್ಮಲಾ ಸೀತಾರಾಮನ್ ತಿಳಿಸಿದರು.