ರಾಜ್ಯಕ್ಕೆ ಪ್ರಧಾನಿಯಿಂದ ಮಲತಾಯಿ ಧೋರಣೆ: ಆರ್.ಬಿ.ತಿಮ್ಮಾಪುರ
![ರಾಜ್ಯಕ್ಕೆ ಪ್ರಧಾನಿಯಿಂದ ಮಲತಾಯಿ ಧೋರಣೆ: ಆರ್.ಬಿ.ತಿಮ್ಮಾಪುರ ರಾಜ್ಯಕ್ಕೆ ಪ್ರಧಾನಿಯಿಂದ ಮಲತಾಯಿ ಧೋರಣೆ: ಆರ್.ಬಿ.ತಿಮ್ಮಾಪುರ](/images/placeholder.jpg)
ಬೆಂಗಳೂರು, ಅ.11: ರಾಜ್ಯದಲ್ಲಿ ಪ್ರವಾಹದಿಂದಾಗಿ ಬೆಳೆ ಬೆಳೆಯುತ್ತಿದ್ದ 22 ಲಕ್ಷ ಎಕರೆ ಜಮೀನು ಹಾಳಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ರೈತರಿಗೆ ಯಾವುದೇ ಆತ್ಮಸ್ಥೈರ್ಯವನ್ನು ತುಂಬಲಿಲ್ಲ. ಆದರೆ, ಬಿಹಾರದ ಜನತೆಗೆ ಟ್ವೀಟ್ ಮೂಲಕ ಆತ್ಮಸ್ಥೈರ್ಯವನ್ನು ತುಂಬುವ ಮೂಲಕ ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ನಲ್ಲಿ ನಿಯಮ 68ರಡಿಯಲ್ಲಿ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಪ್ರವಾಹದಿಂದಾಗಿ ಮನೆ, ಜಮೀನು, ಕೃಷಿ ಸಾಮಗ್ರಿಗಳನ್ನು ಕಳೆದುಕೊಂಡಿದ್ದಾರೆ, ಇದಕ್ಕೆ ಪರಿಹಾರ ನೀಡಿ ಎಂದು ಪ್ರಧಾನಿ ಅವರನ್ನು ಭೇಟಿ ಆಗಲು ಹೋದರೆ ಅವರಿಗೆ ಅವಕಾಶ ನೀಡಿಲ್ಲ. ಪ್ರವಾಹ ಬಿಹಾರ ರಾಜ್ಯಕ್ಕೆ ಬಂದ ತಕ್ಷಣವೇ ಪ್ರಧಾನಿ ಅವರು ಟ್ವೀಟ್ ಮೂಲಕ ಅಲ್ಲಿಯ ಜನರಿಗೆ ಆತ್ಮಸ್ಥೈರ್ಯವನ್ನು ತುಂಬುವ ಮೂಲಕ ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯಕ್ಕೆ ಸೂಕ್ತವಾದ ಪರಿಹಾರ ಬರಲಿಲ್ಲವೆಂದು ಬಸನಗೌಡ ಪಾಟೀಲ್ ಯತ್ನಾಳ, ಡಿ.ಬಿ.ಚಂದ್ರೇಗೌಡ, ಚಕ್ರವರ್ತಿ ಸೂಲಿಬೆಲೆ ಸೇರಿ ಇನ್ನಿತರ ನಿಮ್ಮದೆ ಪಕ್ಷದ ಮುಖಂಡರು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ 38 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಆದರೆ, ತಾತ್ಕಾಲಿಕ ಪರಿಹಾರವೆಂದು ಬರೀ 1200 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದ್ದೀರಿ. ಗಂಜಿ ಕೇಂದ್ರದಲ್ಲಿ ವಾಸ ಮಾಡುತ್ತಿರುವ ಜನರಿಗೆ ಯಾವುದೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಕಿಡಿಕಾರಿದರು.
ಮಡಿಕೇರಿಯಲ್ಲಿ ಪ್ರವಾಹ ಬಂದಾಗ ಒಂದು ಮನೆ ನಿರ್ಮಾಣಕ್ಕಾಗಿ 10 ಲಕ್ಷ ರೂ.ಪರಿಹಾರವನ್ನು ನೀಡಿದ್ದಾರೆ. ಅದೇ ರೀತಿಯಾಗಿ ಉತ್ತರ ಕರ್ನಾಟಕದಲ್ಲೂ ಮನೆ ನಿರ್ಮಾಣಕ್ಕಾಗಿ 10 ಲಕ್ಷ ರೂ.ನೀಡಬೇಕು. ಹಾಗೂ ಉ-ಕ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಬಸವರಾಜ ಇಟಗಿ ಮಾತನಾಡಿ, ಪ್ರವಾಹಗಳು ಬಂದಾಗ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ರಾಜ್ಯ ಸರಕಾರ ಆವರ್ತ ನಿಧಿಯನ್ನು ಸ್ಥಾಪಿಸಬೇಕು. ಇಂತಹ ಆವರ್ತನಿಧಿಯಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ನಷ್ಟವುಂಟಾಗುವುದಿಲ್ಲ. ರೈತರ ಬೆಳೆಗಳಿಗೆ ಇನ್ಸೂರೆನ್ಸ್ ಮಾಡಿಸಿದರೆ ರಾಜ್ಯ ಸರಕಾರ ಒಂದು ರೂಪಾಯಿಯನ್ನೂ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಸಲಹೆ ನೀಡಿದರು.