ಜಗನ್ ರೆಡ್ಡಿ ಸೈಕೋ ರೀತಿ ವರ್ತಿಸುತ್ತಿದ್ದಾರೆ: ಚಂದ್ರಬಾಬು ನಾಯ್ಡು
ವಿಶಾಖಪಟ್ಟಣ, ಅ.12: ರಾಜ್ಯದಲ್ಲಿ ಅಧಿಕಾರದಲ್ಲಿರುವ ಹೊಸ ಸರಕಾರ ಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಇತರ ಪಕ್ಷಗಳ ನಾಯಕರ ವಿರುದ್ಧ ಅನಗತ್ಯ ಹಾಗೂ ಅಕ್ರಮ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಪೊಲೀಸರು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ನಾನು ಜನರೊಂದಿಗೆ ಒಳ್ಳೆಯದಿದ್ದರೆ ಅವರು ನನ್ನೊಂದಿಗೆ ಚೆನ್ನಾಗಿರುತ್ತಾರೆ. ಆದರೆ, ಜಗನ್ ರೆಡ್ಡಿ ಸೈಕೋ ರೀತಿ ವರ್ತಿಸುತ್ತಿದ್ದಾರೆ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದ್ದಾರೆ.
‘‘ವೈಎಸ್ಆರ್ಸಿಪಿ ಆಡಳಿತ ಅತ್ಯಂತ ಕೆಟ್ಟದ್ದಾಗಿದೆ. ಆ ಪಕ್ಷದಲ್ಲಿರುವ ನಾಯಕರು ‘ಜೆ-ಟ್ಯಾಕ್ಸ್ (ಜಗನ್ ಟ್ಯಾಕ್ಸ್)ಸಂಗ್ರಹಿಸುತ್ತಿದ್ದಾರೆ. ನಾನು ಹಲವು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ, ಜಗನ್ ತರಹ ಸಿಎಂ ನೋಡಿಲ್ಲ. ಕಾನೂನು ಎಲ್ಲರಿಗೂ ಒಂದೇ ರೀತಿ ಇರಬೇಕು. ಅಹಂಕಾರದ ವರ್ತನೆ ಬದಲಿಸಬೇಕೆಂದು ಸರಕಾರಕ್ಕೆ ಎಚ್ಚರಿಕೆ ನೀಡುವೆ. ಸರಕಾರ ನಮ್ಮ ಪಕ್ಷದ ಕಾರ್ಯಕರ್ತರನ್ನು ಗುರಿ ಮಾಡುತ್ತಿದೆ. ಇದು ನ್ಯಾಯಸಮ್ಮತವಲ್ಲ’’ ಎಂದು ತೆಲುಗು ದೇಶಂ ಪಕ್ಷ(ಟಿಡಿಪಿ)ಮುಖ್ಯಸ್ಥ ನಾಯ್ಡು ತಿಳಿಸಿದ್ದಾರೆ.