ಲಾರಿ ಢಿಕ್ಕಿ: ಖಾಸಗಿ ಕಂಪೆನಿ ಉದ್ಯೋಗಿ ಸಾವು
ಬೆಂಗಳೂರು, ಅ.12: ಲಾರಿಯೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಐಟಿಪಿಎಲ್ ಮುಖ್ಯ ರಸ್ತೆಯ ಜಿಆರ್ ಟೆಕ್ ಪಾರ್ಕ್ ಬಳಿ ನಡೆದಿದೆ ಎಂದು ವರದಿಯಾಗಿದೆ.
ಕೊಯಮತ್ತೂರು ಮೂಲದ ಗೋಕುಲ ಕೃಷ್ಣನ್ (25) ಎಂಬುವರು ಮೃತರು ಎಂದು ತಿಳಿದುಬಂದಿದೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣನ್ ಅವರು ಶನಿವಾರ ಮುಂಜಾನೆ ನಗರದ ಹೂಡಿಯ ಮನೆಯಿಂದ ಕೆಲಸಕ್ಕೆ ಸ್ಕೂಟರ್ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಐಟಿಪಿಎಲ್ ಮುಖ್ಯ ರಸ್ತೆಯ ಜಿಆರ್ ಟೆಕ್ ಪಾರ್ಕ್ ಬಳಿ ಲಾರಿ ಢಿಕ್ಕಿ ಹೊಡೆದು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ವೈಟ್ ಫೀಲ್ಡ್ ಸಂಚಾರ ಠಾಣಾ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.
Next Story