ಶೀಘ್ರವೇ ಕಬ್ಬು ಅರೆಯುವ ಕ್ರಿಯೆ ಆರಂಭ: ಸಚಿವ ಆರ್.ಅಶೋಕ್
![ಶೀಘ್ರವೇ ಕಬ್ಬು ಅರೆಯುವ ಕ್ರಿಯೆ ಆರಂಭ: ಸಚಿವ ಆರ್.ಅಶೋಕ್ ಶೀಘ್ರವೇ ಕಬ್ಬು ಅರೆಯುವ ಕ್ರಿಯೆ ಆರಂಭ: ಸಚಿವ ಆರ್.ಅಶೋಕ್](https://www.varthabharati.in/sites/default/files/images/articles/2019/10/12/214453-1570900207.jpg)
ಬೆಂಗಳೂರು, ಅ.12: ಪಾಂಡವಪುರ ಸಕ್ಕರೆ ಕಾರ್ಖಾನೆ ಹಾಗೂ ಹೊಳೆನರಸೀಪುರದಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವುದನ್ನು ಶೀಘ್ರವೇ ಆರಂಭಿಸಲಿವೆ ಎಂದು ಕಂದಾಯ ಹಾಗೂ ಮಂಡ್ಯ ಉಸ್ತವಾರಿ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ.
ಶನವಾರ ವಿಧಾನಪರಿಷತ್ನಲ್ಲಿ ನಿಯಮ 330ಎ ಅಡಿಯಲ್ಲಿ ಜೆಡಿಎಸ್ನ ಶ್ರೀಕಂಠೇಗೌಡ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಮೈಸೂರು, ಮಂಡ್ಯ, ರಾಮನಗರ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳೆದಿರುವ ಕಬ್ಬನ್ನು ಶೀಘ್ರವೇ ಅರಿಯುವಂತಹ ಕೆಲಸಕ್ಕೆ ಚಾಲನೆ ನೀಡಲಾಗುವುದು. ಹೆಚ್ಚುವರಿ ಕಬ್ಬನ್ನು ಬೇರೆ ರಾಜ್ಯಗಳಿಗೆ ಕಳುಹಿಸಲಾಗುವುದು. ಇದಕ್ಕೆ ತಗಲುವ ಸಾಗಾಣಿಕೆ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ತಿಳಿಸಿದರು.
ಗದ್ದೆಗಳಲ್ಲಿ ಬೆಳೆದ ಕಬ್ಬನ್ನು ಕಠಾವು ಮಾಡುವಲ್ಲೂ ಮಧ್ಯವರ್ತಿಗಳ ಹಾವಳಿಯಿದೆ. 14 ತಿಂಗಳ ಅವಧಿಯ ಕಬ್ಬನ್ನು ಕಠಾವು ಮಾಡುವ ಬಗ್ಗೆ ಮಧ್ಯವರ್ತಿಗಳು ತಮಗೆ ಬೇಕಾದ ಗದ್ದೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರೆ. ಇದನ್ನು ತಡೆಯುವ ನಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕೊಡಲಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಮೈಸೂರು ಶುಗರ್ ಕಾರ್ಖಾನೆಯನ್ನು ಬಂದ್ ಮಾಡಿ, ಹೊಸದನ್ನು ಸ್ಥಾಪಿಸಬೇಕು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಈ ಕಾರ್ಖಾನೆಯ ಪುನಃಶ್ಚೇತನಕ್ಕೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸರಕಾರಗಳು ಕೋಟ್ಯಂತರ ರೂ.ವೆಚ್ಚ ಮಾಡಿವೆ. ಆದರೂ ಕಾರ್ಖಾನೆ ಮಾತ್ರ ಅಭಿವೃದ್ಧಿಯಾಗಿಲ್ಲ ಎಂದರು.