ಎನ್ಟಿಎಂಎಸ್ ಹೆಣ್ಣು ಮಕ್ಕಳ ಶಾಲೆ ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ
ಸರಕಾರಕ್ಕೆ ಪ್ರಗತಿಪರರು, ಸಾಹಿತಿಗಳು, ದಲಿತರು, ಕನ್ನಡ ಹೋರಾಟಗಾರರ ಎಚ್ಚರಿಕೆ
![ಎನ್ಟಿಎಂಎಸ್ ಹೆಣ್ಣು ಮಕ್ಕಳ ಶಾಲೆ ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎನ್ಟಿಎಂಎಸ್ ಹೆಣ್ಣು ಮಕ್ಕಳ ಶಾಲೆ ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ](/images/placeholder.jpg)
ಮೈಸೂರು,ಅ.13: ಯಾವುದೇ ಕಾರಣಕ್ಕೂ ಎನ್.ಟಿ.ಎಂ.ಎಸ್ ಹೆಣ್ಣು ಮಕ್ಕಳ ಕನ್ನಡ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಪ್ರಗತಿಪರ ಚಿಂತಕರು, ದಸಂಸ, ಕನ್ನಡ ಹೋರಾಟಗಾರರು, ಸಾಹಿತಿಗಳು ಸೇರಿ ಅನೇಕ ಕೂಲಿ ಕಾರ್ಮಿಕರು, ರೈತ ಸಂಘದವರು ಕಾರ್ಯಕರ್ತರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹರಾಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಣದಲ್ಲಿ ಶನಿವಾರದಿಂದ ನಿರಂತರ ಪ್ರತಿಭಟನೆ ನಡೆಯುತ್ತಿದ್ದು, ಸರಕಾರದ ನಡೆ ವಿರುದ್ಧ ಹೋರಾಟಗಾರರು ರವಿವಾರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಖ್ಯಾತ ಸಾಹಿತಿ ದೇವನೂರು ಮಹದೇವ ಮಾತನಾಡಿ, ವಿವೇಕಾನಂದರ ಆಶಯವೇ ಶಾಲೆಗಳು. ಶಾಲೆಗಳ ಮೂಲಕ ದಲಿತರು, ಬಡವರು, ಮತ್ತು ಹೆಣ್ಣು ಮಕ್ಕಳು ವಿದ್ಯೆ ಕಲಿಯುತ್ತಿದ್ದು, ಆದರೆ ಅದಕ್ಕೆ ಪುರೋಹಿತಶಾಹಿ ರಾಮಕೃಷ್ಣ ಆಶ್ರಮ ವಿರೋಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮಕೃಷ್ಣ ಆಶ್ರಮದವರು ಬೇಕಾದರೆ ಬೇರೆ ಕಡೆ ಜಾಗ ಪಡೆದು ಶಾಲೆಗಳನ್ನು ಕಟ್ಟಲಿ. ಬಡವರು, ಪೌರಕಾರ್ಮಿಕರು ಮತ್ತು ಹೆಣ್ಣು ಮಕ್ಕಳ ಶಾಲೆಗಳನ್ನು ತೆರೆಯಲಿ. ಅಲ್ಲಿ ಬೇಕಾದರೆ ಸ್ವಾಮಿ ವಿವೇಕಾನಂದರ ಸ್ಥೂಪವನ್ನು ನಿರ್ಮಾಣ ಮಾಡಲಿ. ಆದರೆ ಈ ಹೆಣ್ಣು ಮಕ್ಕಳ ಶಾಲೆಯಲ್ಲಿ ಬೇಡ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರು ದಲಿತರು, ಬಡವರು ಮತ್ತು ತಳ ಸಮುದಾಯದ ಪರವಾಗಿದ್ದರು ಎಂಬುದಕ್ಕೆ ಪೂರಕವಾಗಿ ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋದಲ್ಲಿದ್ದ ಸಂದರ್ಭದಲ್ಲಿ ಮೈಸೂರು ಅರಸರಾಗಿದ್ದ ಚಾಮರಾಜ ಒಡೆಯರ್ ಅವರಿಗೆ ಬರೆದ ಪತ್ರದ ಕೆಲವು ಸಾಲುಗಳನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಪ್ರಸ್ತಾಪಿಸಿದರು.
ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, 'ವಿವೇಕಾನಂದರು ಈ ಶಾಲೆಯಲ್ಲಿ ಮೂರು ದಿನ ತಂಗಿದ್ದರು. ಇದೊಂದು ಐತಿಹಾಸಿಕ ಗುರುತು. ಹಾಗಾಗಿ ಇಲ್ಲಿ ವಿವೇಕರ ಸ್ಮಾರಕ ನಿರ್ಮಾಣ ಮಾಡಬೇಕು ಎಂದಿದ್ದಾರೆ ಎಂದರು.
ಚಾಮರಾಜ ಒಡೆಯರ್ ಅವರು ಆಡಳಿತ ನಡೆಸುತ್ತಿದ್ದಾಗ ಅವರೇ ವಿವೇಕಾನಂದರಿಗೆ ಅಮೆರಿಕಗೆ ಹೋಗಲು ಧನ ಸಹಾಯ ಮಾಡಿದ್ದರು ಎಂಬುದು ಸಂಪುಟದಲ್ಲಿ ಅಡಕವಾಗಿದೆ. ವಿವೇಕಾನಂದರು ಚಾಮರಾಜ ಒಡೆಯರ್ ಅವರಿಗೆ ಪತ್ರ ಬರೆದಿದ್ದಾಗ 'ಬಡ ಮಕ್ಕಳಿಗೆ ಶಿಕ್ಷಣ ಒದಗಿಸದಿದ್ದರೆ, ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದಿದ್ದರು. ದರಿದ್ರರೇ ನಮ್ಮ ದೇವರು ಎನ್ನುತ್ತಿದ್ದರು. ಆದರೆ, ಇಂದಿನ ಸ್ವಾಮೀಜಿಗಳು ಹಿಂದೂ ಧರ್ಮವನ್ನು ಟೀಕಿಸಿದಷ್ಟು ವಿವೇಕಾನಂದರು ಟೀಕಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಕಳೆದ ಹತ್ತು ವರ್ಷ ಗಳಿಂದೀಚೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಶಾಲೆಯನ್ನು ಕಬಳಿಸಲು ಯತ್ನಿಸುತ್ತಿವೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಲೇ ಈ ಜಾಗವನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿವೆ. ಇಲ್ಲಿ 48 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಕೆಲವು ಮನುವಾದಿಗಳು ವಿವೇಕಾನಂದರ ಸ್ಮಾರಕ ನಿರ್ಮಾಣವಾಗಬೇಕು ಎಂದು ಷಡ್ಯಂತರ ರೂಪಿಸುತ್ತಿವೆ. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಗೆ ಉತ್ಸಾಹ ತುಂಬಿದ ಕ್ರಾಂತಿಗೀತೆಗಳು: ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಆಗಾಗ ಕ್ರಾಂತಿಗೀತೆಗಳನ್ನು ಹಾಡುವ ಮೂಲಕ ಪ್ರತಿಭಟನೆಗೆ ಉತ್ಸಾಹ ತುಂಬಿದರು.
ಹಿರಿಯ ಚಿಂತಕ ಪ.ಮಲ್ಲೇಶ, ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವ ಅಧ್ಯಕ್ಷ ಚಾಮರಸ ಪಾಟೀಲ್, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್.ಗೌಡ, ಕೊ.ಸು.ನರಸಿಂಹ ಮೂರ್ತಿ, ಸಾಹಿತಿ ಬನ್ನೂರು ಕೆ.ರಾಜು, ಬೋಪಣ್ಣ, ಪೂಣಚ್ಚ, ಚೆಂಗಪ್ಪ, ಸುಜಿಬೋಪಯ್ಯ, ಸೂರಜ್, ಮಂಜು, ಪ್ರತಾಪ್ ವಿಜಯ, ದೇವರಾಜ ಅರಸ್, ಬನ್ನೂರು ಕೃಷ್ಣಪ್ಪ, ಪಿ.ಮರಂಕಯ್ಯ, ಕಲಾವಿದ ಮೈಮ್ ರಮೇಶ್, ಬೆಟ್ಟಯ್ಯ ಕೋಟೆ, ಮಂಜುಳ ಮಾನಸ, ನಿರ್ಮಲ ರಾಜಶೇಖರ ಕೋಟಿ, ರಶ್ಮಿ ಕೌಜಲಗಿ, ರಮ್ಯಾ ಪಾಟೀಲ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಡೋಂಗಿ ಸ್ವಾಮೀಜಿಗಳಿಗೆ ಪೊರಕೆ ಹಾರ ಹಾಕಿ
'ದರಿದ್ರ ದೇವೋಭವ' ಎಂದು ವಿವೇಕಾನಂದರು ಹೇಳುತ್ತಿದ್ದರು. ಆದರೆ, ರಾಮಕೃಷ್ಣ ಆಶ್ರಮದಲ್ಲಿ ಹೊಟ್ಟೆ ತುಂಬಿದವರು ಹಾಗೂ ಶ್ರೀಮಂತರೇ ಇದ್ದಾರೆ. ಕಾವಿ ಧರಿಸಿ, ಹಗಲು ದರೋಡೆ ಮಾಡುತ್ತಿರುವ ಇಂಥ ಡೋಂಗಿ ಸ್ವಾಮೀಜಿಗಳಿಗೆ ಹೂವಿನ ಹಾರದ ಬದಲಾಗಿ ಪೊರಕೆ ಹಾರ ಹಾಕಬೇಕು. ಬಿಜೆಪಿ ಸರ್ಕಾರ ಹಾಗೂ ಆಶ್ರಮದ ಸ್ವಾಮೀಜಿಗಳ ಆಟ ನಿಲ್ಲಿಸಿ, ಸ್ವಾಮೀಜಿಗಳನ್ನು ಜೈಲಿಗೆ ಕಳುಹಿಸಬೇಕು. ಮಿತಿ ಮೀರಿದರೆ ಚಪ್ಪಲಿಯಲ್ಲೇ ಹೊಡೆದು ಕಳುಹಿಸಬೇಕು.
ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಪ್ರಗತಿಪರ ಚಿಂತಕ
ಪರಿವರ್ತನೆ ಜಗದ ನಿಯಮ, ಅಂದು ರಾಮಕೃಷ್ಣ ಆಶ್ರಮದ ಪರವಾಗಿದ್ದವರು ಇಂದು ನಮ್ಮ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಇನ್ನೂ ಕೆಲವು ಹಿರಿಯ ಸಾಹಿತಿಗಳು ರಾಮಕೃಷ್ಣ ಆಶ್ರಮದ ಪರ ಇದ್ದಾರೆ. ಕೆಲವರು ರಾಮಕೃಷ್ಣ ಆಶ್ರಮದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಅವರು ಪರಿವರ್ತನೆಯಾಗಲಿ.
-ಬನ್ನೂರು ಕೆ.ರಾಜು, ಸಾಹಿತಿ.
ಕೋಮುವಾದ ಬೆಳೆಯುವುದಕ್ಕೆ ಸರ್ಕಾರ ಈ ಭೂಮಿ ನೀಡಿರುವ ಕ್ರಮ ಸಾಕ್ಷಿಯಾಗಿದೆ. ವಿವೇಕಾನಂದರ ಹೆಸರಿನಲ್ಲಿ ಕೋಮುವಾದಿಗಳು ಬೀಡುಬಿಟ್ಟು ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರವೂ ಇದಕ್ಕೆ ಸಹಕಾರ ನಿಡುತ್ತಿದೆ. ಈ ನಡೆ ಮುಂದುವರೆದಲ್ಲಿ ಉಗ್ರ ಹೋರಾಟ ನಡೆಸಲಾಗುವುದು.
-ಬೆಟ್ಟಯ್ಯಕೋಟೆ, ದಸಂಸ ಮುಖಂಡ.
ರಾಮಕೃಷ್ಣ ಆಶ್ರಮದವರು ವಿವೇಕಾನಂದರು ಈ ರಸ್ತೆಯಲ್ಲಿ ಸ್ಮಾರಕ ನಿರ್ಮಿಸಬೇಕು ಎನ್ನುತ್ತಿದ್ದಾರೆ. ವಿವೇಕಾನಂದರು ನಿಂತು, ಕುಂತ ಜಾಗದಲ್ಲೆಲ್ಲ ಸ್ಮಾರಕ ನಿರ್ಮಿಸುವುದಾದರೇ, ಶಾಲೆಗಳನ್ನು ಏನು ಮಾಡಬೇಕು. ವಿವೇಕಾನಂದರ ವಿಚಾರಗಳನ್ನು ಬೇರೆ ರೀತಿಯಲ್ಲಿ ವೈಭವೀಕರಿಸುತ್ತಿದ್ದಾರೆ. ಇಂಥ ಕೆಲಸವನ್ನು ನೋಡಿದ್ದರೆ ವಿವೇಕಾನಂದರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು.
-ಚೋರನಹಳ್ಳಿ ಶಿವಣ್ಣ, ದಸಂಸ ಮುಖಂಡ.