ಕಳವಿಗೆ ಸಂಚು ರೂಪಿಸಿದ್ದ ಆರೋಪ: ಐವರ ಬಂಧನ
![ಕಳವಿಗೆ ಸಂಚು ರೂಪಿಸಿದ್ದ ಆರೋಪ: ಐವರ ಬಂಧನ ಕಳವಿಗೆ ಸಂಚು ರೂಪಿಸಿದ್ದ ಆರೋಪ: ಐವರ ಬಂಧನ](https://www.varthabharati.in/sites/default/files/images/articles/2019/10/14/214695-1571062326.jpg)
ಬೆಂಗಳೂರು, ಅ.14: ಕಳವು ಮಾಡಲು ಸಂಚು ರೂಪಿಸಿದ್ದ ಆರೋಪದಡಿ ಐವರನ್ನು ಬಂಧಿಸಿರುವ ಇಲ್ಲಿನ ಬಾಗಲಗುಂಟೆ ಠಾಣಾ ಪೊಲೀಸರು, 8 ಲಕ್ಷ ರೂ. ಮೌಲ್ಯದ 3 ಕಾರು, 5 ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ.
ಹೊಸದುರ್ಗದ ನಿವಾಸಿ ಸದ್ದಾಂ(26), ಮೌಲಾಲಿ(24), ಸೋಮಶೇಖರ್(19), ನವೀನ್(28), ಗಂಗೊಂಡನಹಳ್ಳಿಯ ಮಂಜುನಾಥ್(25) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಬಾಗಲಗುಂಟೆಯ ರವೀಂದ್ರ ನಗರದ ಕಡೆಯಿಂದ ಶೆಟ್ಟಿಹಳ್ಳಿ ರಸ್ತೆ ಮಾರ್ಗವಾಗಿ ಸಾಗುವ ವ್ಯಕ್ತಿಗಳನ್ನು ಮಾರಕಾಸ್ತ್ರಗಳಿಂದ ಬೆದರಿಕೆ, ಹಣ ವಸೂಲಿ ಮಾಡಲು ಮುಂದಾಗಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳ ಪೈಕಿ ಇಬ್ಬರ ಮೇಲೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಬಾಗಲಗುಂಟೆ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story