ಮುರ್ಶಿದಾಬಾದ್ ತ್ರಿವಳಿ ಕೊಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ
ಕೋಲ್ಕತಾ,ಅ.15: ಮುರ್ಶಿದಾಬಾದ್ ತ್ರಿವಳಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತಾ ಪೊಲೀಸರು ಮಂಗಳವಾರ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಉತ್ಪಲ್ ಬೆಹ್ರಾ ಎಂಬಾತನನ್ನು ಸಹಾಪುರ ಪ್ರದೇಶದ ಸಾಗರ್ದಿಘಿಯಲ್ಲಿ ಬಂಧಿಸಲಾಗಿದೆ ಎಂದು ಮುರ್ಶಿದಾಬಾದ್ ಪೊಲೀಸ್ ಅಧೀಕ್ಷಕ ಮುಕೇಶ್ ಕುಮಾರ್ ಮಂಗಳವಾರ ಬೆಳಗ್ಗೆ ತಿಳಿಸಿದ್ದಾರೆ.
ದುರ್ಗಾ ಪೂಜೆ ಹಬ್ಬದ ಸಂಭ್ರಮದಲ್ಲಿದ್ದಾಗ ಅ.8ರಂದು ಮುರ್ಶಿದಾಬಾದ್ ಜಿಲ್ಲೆಯ ಜಿಯಾಗಂಜ್ ಮನೆಯೊಂದರಲ್ಲಿ ಶಿಕ್ಷಕ ಬಂಧು ಪ್ರಕಾಶ್ ಪಾಲ್(35 ವರ್ಷ), ಅವರ ಗರ್ಭಿಣಿ ಪತ್ನಿ ಬ್ಯೂಟಿ ಹಾಗೂ 8ರ ವಯಸ್ಸಿನ ಪುತ್ರ ಅಂಗನ್ ಮೃತಸ್ಥಿತಿಯಲ್ಲಿ ಕಂಡುಬಂದಿದ್ದರು.
ಎರಡು ಎಲ್ಐಸಿ ಪಾಲಿಸಿಗೆ ಉತ್ಪಲ್ ಬೆಹ್ರಾ, ಪಾಲ್ಗೆ ಹಣ ಪಾವತಿಸಿದ್ದ. ಪಾಲ್ ಮೊದಲ ಪಾಲಿಸಿಗೆ ರಶೀದಿ ನೀಡಿದ್ದರು. ಆದರೆ, ಎರಡನೇ ಪಾಲಿಸಿಗೆ ರಶೀದಿ ನೀಡಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಕಳೆದ ಕೆಲವು ವಾರಗಳ ಕಾಲ ಪಾಲ್ ಹಾಗೂ ಬೆಹ್ರಾ ನಡುವೆ ಜಗಳ ಕೂಡ ನಡೆದಿತ್ತು. ಪಾಲ್ ಅವರು ಬೆಹ್ರಾಗೆ ಅವಮಾನಿಸಿದ್ದರು. ಇದರಿಂದ ಕ್ರೋಧಗೊಂಡಿದ್ದ ಬೆಹ್ರಾ ಹತ್ಯೆಗೆ ಸಂಚು ನಡೆಸಿದ್ದ. ಬೆಹ್ರಾ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.