ಅರಣ್ಯ ಸಿಬ್ಬಂದಿಗಳಿಂದ ದೈಹಿಕ, ಮಾನಸಿಕ ಕಿರುಕುಳ ಆರೋಪ: ಸೂಕ್ತ ಕ್ರಮಕ್ಕಾಗಿ ಮನವಿ
ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಅರಣ್ಯ ಅತಿಕ್ರಮಣದಾರರನ್ನು ಗುರಿಯಾಗಿಸಿಕೊಂಡು ಅರಣ್ಯ ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿ, ವನಪಾಲಕರು, ಗಾರ್ಡುಗಳು, ವಾಚಮನ್ಗಳು ದೈಹಿಕ ಮಾನಸಿಕ ಕಿರುಕುಳ ನೀಡುವುದರ ಮೂಲಕ ದೌರ್ಜನ್ಯ ಎಸಗುತ್ತಿದ್ದು ಅಂತಹ ಸಿಬ್ಬಂದಿಗಳ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕರ ನೇತೃತ್ವದಲ್ಲಿ ಮಂಗಳವಾರ ನೂರಾರು ಅರಣ್ಯ ಅತಿಕ್ರಮಣದಾರರು ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷರಿಗೆ ದೂರು ನೀಡಿದ್ದಾರೆ.
ಭಟ್ಕಳ ವ್ಯಾಪ್ತಿಯ ನಗರ ಪ್ರದೇಶ, ಜಾಲಿ, ಬೆಳಕೆ ವ್ಯಾಪ್ತಿಯಲ್ಲಿ ಬರುವ ಅರಣ್ಯ ರಕ್ಷಕರು, ವಾಚ್ಮನ್, ಅತಿಕ್ರಮಣ ಸ್ವಾಧೀನದಲ್ಲಿರುವ ಮನೆಗಳಿಗೆ ಏಕಾಏಕಿ ಅಕ್ರಮ ಪ್ರವೇಶ ಮಾಡಿ ಅತಿಕ್ರಮಣದಾರರ ಸಾಗುವಳಿಗೆ ಆತಂಕವನ್ನುಂಟು ಮಾಡುವದಲ್ಲದೆ ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ಹಾನಿಯನ್ನುಂಟು ಮಾಡುತ್ತಿದ್ದಾರೆ. ಮನೆಯಲ್ಲಿರುವ ಮಹಿಳೆಯರನ್ನುಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದು ಇಂತಹ ಅರಣ್ಯ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಜಾಲಿ ರೋ ನಿವಾಸಿ, ಖಾನಮೀರ ಸಾಹೇಬ್ ಬಾಗಸಿರಾಜ್, ಜಾಮಿಯಾಬಾದ್ ಜನತಾ ಕಾಲೋನಿ ನಿವಾಸಿ ರಹಿಮಾ ಶಾಬಂದ್ರಿ, ಅಮೀನುದ್ದೀನ್ ರಸ್ತೆ ಮದೀನಾ ಕಾಲನಿಯ ಮುಹಮ್ಮದ್ ಫೈಸಲ್ ಮನವಿ ಮಾಡಿಕೊಂಡಿದ್ದಾರೆ.