ಅ.18:ರಬ್ಬರ್ ಬೆಳೆಗಾರರ ರಾಜ್ಯ ಮಟ್ಟದ ಸಮಾವೇಶ
ಮಂಗಳೂರು : ರಬ್ಬರ್ ಬೆಲೆ ತೀವ್ರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ರಬ್ಬರ್ ಬೆಳೆಗಾರರ ಸಮಸ್ಯೆಯ ಬಗ್ಗೆ ಚರ್ಚಿಸಲು ಅ.18ರಂದು ಬೆಳಗ್ಗೆ 11 ಗಂಟೆಗೆ ನಗರದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ರಾಜ್ಯ ರಬ್ಬರ್ ಬೆಳೆಗಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ರಬ್ಬರ್ ಮಂಡಳಿಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಕೆ.ಎನ್.ರಾಘವನ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 60 ಸಾವಿರ ರಬ್ಬರ್ ಬೆಳೆಗಾರರು ಸುಮಾರು 55 ಸಾವಿರ ಹೆಕ್ಟೇರ್ನಲ್ಲಿ ರಬ್ಬರ್ ಬೆಳೆಯುತ್ತಿದ್ದಾರೆ.ಜಾಗತಿಕ ಮಟ್ಟದಲ್ಲಿ ಭಾರತ ಅತ್ಯಂತ ಹೆಚ್ಚು ರಬ್ಬರ್ ಉತ್ಪಾದಿ ಸುವ ದೇಶಗಳಲ್ಲಿ 6ನೆ ಸ್ಥಾನದಲ್ಲಿದೆ.ಪಶ್ಚಿಮ ಘಟ್ಟದ 8 ಜಿಲ್ಲೆಗಳಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ದೇಶದ ಉತ್ಪಾದನೆಯಲ್ಲಿ ಶೇ 6ರಷ್ಟು ಉತ್ಪಾದನೆ ರಾಜ್ಯದಲ್ಲಾಗುತ್ತಿದೆ ಕಳೆದ 2012ರಲ್ಲಿ ರಬ್ಬರ್ ಧಾರಣೆ ಕೆ.ಜಿ ಒಂದಕ್ಕೆ 242 ಇತ್ತು,2019ರ ಅಕ್ಟೋಬರ್ನಲ್ಲಿ ರಬ್ಬರ್ ಧಾರಣೆ ಕೆ.ಜಿ ಒಂದಕ್ಕೆ 118ಕ್ಕೆ ಇಳಿಕೆಯಾಗಿದೆ.ರಬ್ಬರ್ ಬೆಳೆಗಾರರಿಗೆ ನೆರವು ನೀಡಲು ರಚನೆಗೊಂಡಿರುವ ಕೇಂದ್ರ ಸರಕಾರದ ವಾಣಿಜ್ಯ ಮಂತ್ರಾಲಯದ ಅಧೀನದಲ್ಲಿ ರಬ್ಬರ್ ಮಂಡಳಿ ಇದೆ.
ಈ ಹಿನ್ನೆಲೆಯಲ್ಲಿ ಅ.18ರಂದು ನಡೆಯುವ ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಕರ್ನಲ್ ಶರತ್ ಭಂಡಾರಿ ತಿಳಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಪಿ.ಗೊಪಾಲಕೃಷ್ಣ ಭಟ್,ಕೃಷಿಕ ಕ್ಯಾಪ್ಟನ್ ದೀಪಕ್ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು.