ಮೂಡುಬಿದಿರೆಯಲ್ಲಿ ದ.ಕ. ಜಿಲ್ಲಾ ಮಟ್ಟದ ಪ.ಪೂ. ಕ್ರೀಡಾಕೂಟ
ಮೂಡುಬಿದಿರೆ : ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಎಡಪದವು ಸ್ವಾಮಿ ವಿವೇಕಾನಂದ ಪ.ಪೂ. ಕಾಲೇಜು ಇವುಗಳ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳ 2019-20ನೇ ಸಾಲಿನ ಕ್ರೀಡಾಕೂಟವು ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ನಡೆಯಿತು.
ಮಾಜಿ ಸಚಿವ ಕೆ, ಅಮರನಾಥ ಶೆಟ್ಟಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಮೂಡುಬಿದಿರೆಯಲ್ಲಿರುವ `ಸಿಂಥೆಟಿಕ್ ಟ್ರ್ಯಾಕ್ನಿಂದಾಗಿ ಬಹಳಷ್ಟು ಸಾಧನೆ ದಾಖಲಾಗುತ್ತಿದೆ. ಇಂಥಹ ಟ್ರ್ಯಾಕ್ನಲ್ಲಿ ಅಭ್ಯಾಸ ಮಾಡುವ ಮೂಲಕ ಹಂತಹಂತವಾಗಿ ದಾಖಲೆಗಳನ್ನು ವೃದ್ಧಿಸುತ್ತ ಬರಲು ಕ್ರೀಡಾಳುಗಳು ಪ್ರಯತ್ನಿಸಬೇಕು' ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಜನಾರ್ದನ ಗೌಡ ಧ್ವಜಾರೋಹಣ ನೆರವೇರಿಸಿ, 'ದೇಶದ ಕ್ರೀಡೆ ಮಾತ್ರವಲ್ಲ ರಕ್ಷಣೆಗೆ ಸದೃಢ ಯುವಜನರನ್ನು ಸಜ್ಜುಗೊಳಿಸಿ, ಅವರ ಮಾನಸಿಕ, ದೈಹಿಕ ಕ್ಷಮತೆಯನ್ನು ವೃದ್ಧಿಸಲು ಕ್ರೀಡಾಚಟುವಟಿಕೆಗಳು ಅಗತ್ಯ' ಎಂದು ಹೇಳಿ ಶುಭ ಹಾರೈಸಿದರು.
ದ.ಕ. ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಉಮೇಶ ಕರ್ಕೇರಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಪದ್ಮನಾಭ ಎಚ್. ಸ್ವಾಗತಿಸಿದರು. ವಾಸು ಕೆ. ನಿರೂಪಿಸಿ ವಂದಿಸಿದರು. ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ಪ.ಪೂ. ಕಾಲೇಜುಗಳ ಸುಮಾರು 300 ಮಂದಿ ಕ್ರೀಡಾಳುಗಳು ಪಾಲ್ಗೊಂಡಿದ್ದರು.