'ಮಧ್ಯಪ್ರದೇಶ ರಸ್ತೆಯನ್ನು ಹೇಮಮಾಲಿನಿ ಕೆನ್ನೆಯಂತೆ ಮಾಡುತ್ತೇವೆ'
ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಪಿ.ಸಿ. ಶರ್ಮಾ
ಭೋಪಾಲ್: ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಅವರ ಕೆನ್ನೆಯಂತಿರುವ ಮಧ್ಯಪ್ರದೇಶದ ರಸ್ತೆಗಳನ್ನು ಸಂಸದೆ ಹೇಮಮಾಲಿನಿಯ ಕೆನ್ನೆಯಂತೆ ಕಾಂಗ್ರೆಸ್ ಸರ್ಕಾರ ಪರಿವರ್ತಿಸಲಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಮಧ್ಯಪ್ರದೇಶ ಸಚಿವ ಪಿ.ಸಿ. ಶರ್ಮಾ ನೀಡಿದ್ದಾರೆ.
"ಮಧ್ಯಪ್ರದೇಶದ ರಸ್ತೆಗಳನ್ನು ವಾಷಿಂಗ್ಟನ್ ರಸ್ತೆಗಳಂತೆ ಅಭಿವೃದ್ಧಿಪಡಿಸಲಾಗಿತ್ತು. ಆ ರಸ್ತೆಗಳು ಇಂದು ಏನಾಗಿವೆ ? ಭಾರೀ ಮಳೆಯಿಂದಾಗಿ ಎಲ್ಲೆಡೆ ಹೊಂಡಗಳಾಗಿವೆ. ಇಂದಿನ ರಸ್ತೆಗಳ ಸ್ಥಿತಿ ಸಿಡುಬಿನ ಕಲೆಗಳನ್ನು ಹೊಂದಿದ ಕೆನ್ನೆಯಂತಾಗಿದೆ. ರಸ್ತೆಗಳ ಇಂದಿನ ಸ್ಥಿತಿ ಕೈಲಾಶ್ ವಿಜಯವರ್ಗಿಯಾ ಅವರ ಕೆನ್ನೆಯಂತಾಗಿದೆ" ಎಂದು ಸುದ್ದಿಗಾರರ ಜತೆ ಮಾತನಾಡುವ ವೇಳೆ ಸಚಿವರು ಹೇಳಿದರು.
ಮುಖ್ಯಮಂತ್ರಿ ಕಮಲ್ನಾಥ್ ಅವರ ಸೂಚನೆಯಂತೆ 15 ದಿನಗಳ ಒಳಗಾಗಿ ರಸ್ತೆ ದುರಸ್ತಿ ಮಾಡಲಾಗುತ್ತದೆ. ಶೀಘ್ರವೇ ರಸ್ತೆಗಳು ಹೇಮಮಾಲಿನಿ ಕೆನ್ನೆಯಂತಾಗಲಿವೆ ಎಂದು ಭರವಸೆ ನೀಡಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕರು ಹದಗೆಟ್ಟ ರಸ್ತೆಗಳ ಸ್ಥಿತಿ ಬಗ್ಗೆ ಕಮಲ್ನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.