ಅಯೋಧ್ಯೆ ವಿಚಾರಣೆ: ಅಖಿಲ ಭಾರತ ಹಿಂದು ಮಹಾಸಭಾ ನೀಡಿದ್ದ ನಕ್ಷೆ ಹರಿದ ವಕೀಲ ರಾಜೀವ್ ಧವನ್
ಹೊಸದಿಲ್ಲಿ, ಅ.16: ಅಯೋಧ್ಯೆ ಪ್ರಕರಣದ ವಿಚಾರಣೆಯ ಕೊನೆಯ ದಿನವಾದ ಇಂದು ಸುನ್ನಿ ವಕ್ಫ್ ಬೋರ್ಡನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ರಾಜೀವ್ ಧವನ್ ಅಖಿಲ ಭಾರತ ಹಿಂದು ಮಹಾಸಭಾ ನೀಡಿದ್ದ ರಾಮ ಜನ್ಮಸ್ಥಾನವನ್ನು ತೋರಿಸುವ ನಕ್ಷೆಯ ಚಿತ್ರವನ್ನು ಕಲಾಪದ ಸ್ಥಳದಲ್ಲಿಯೇ ಹರಿದು ನ್ಯಾಯಾಧೀಶರ ಆಕ್ರೋಶಕ್ಕೆ ಕಾರಣರಾದರು.
"ಈ ನಕ್ಷೆಯನ್ನು ಹರಿಯಲು ನಿಮ್ಮ ಅನುಮತಿ ಕೇಳಬಹುದೇ?" ಎನ್ನುತ್ತಾ ಧವನ್ ಆ ನಕ್ಷೆಯನ್ನು ಹರಿದಿದ್ದರು. ವಿವಾದಿತ ಭೂಮಿಯ ಮೇಲಿನ ಹಕ್ಕು ಸ್ಥಾಪಿಸುವ ನಿಟ್ಟಿನಲ್ಲಿ ಕುನಾಲ್ ಕಿಶೋರ್ ಅವರಿಂದ ಪ್ರಕಟಿತ ಕೃತಿಯನ್ನು ಸಾಕ್ಷಿಯಾಗಿ ಅಖಿಲ ಭಾರತ ಹಿಂದು ಮಹಾಸಭಾದ ವಕೀಲರಾದ ವಿಕಾಸ್ ಸಿಂಗ್ ಮಂಡಿಸಿದಾಗ ಧವನ್ "ಸುಪ್ರೀಂ ಕೋರ್ಟ್ ಈ ಕೃತಿಯನ್ನು ಅವಲಂಬಿಸಬಾರದು" ಎಂದು ಹೇಳಿ ಅದನ್ನು ಹರಿಯಲು ಅನುಮತಿ ಕೇಳಿದಾಗ ``ಏನು ಬೇಕಾದರೂ ಮಾಡಿಕೊಳ್ಳಿ'' ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಸಿಟ್ಟಿನಿಂದ ಹೇಳಿದರು. ಕೊನೆಗೆ ವಕೀಲರು ಪುಟಗಳನ್ನು ಹರಿದಾಗ ನ್ಯಾಯಾಧೀಶರು ಹೊರ ನಡೆಯುವುದಾಗಿ ಎಚ್ಚರಿಸಿದರು.
"ಶಿಷ್ಟಾಚಾರ ಹಾಳಾಯಿತು, ಶಿಷ್ಟಾಚಾರ ಕಾಪಾಡಲಾಗಿಲ್ಲ. ಈ ರೀತಿ ಕಲಾಪ ಮುಂದುವರಿದರೆ ನಾವು ಎದ್ದು ಹೊರಹೋಗಬೇಕಾಗುತ್ತದೆ" ಎಂದು ಗೊಗೊಯಿ ಹೇಳಿದರು.