ಮೋದಿ ರ್ಯಾಲಿಗೆ ಮರಗಳ ಕಡಿತ: ಸಮರ್ಥಿಸಿದ ಕೇಂದ್ರ ಪರಿಸರ ಸಚಿವ!
ಮುಂಬೈ,ಅ.16: ಪ್ರಧಾನಿ ಮೋದಿ ರ್ಯಾಲಿಗಾಗಿ ಮರಗಳನ್ನು ಕಡಿದಿರುವುದನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೆಕರ್, ಇಂತಹ ಘಟನೆಗಳು ಹಿಂದೆಯೂ ನಡೆದಿವೆ ಮತ್ತು ಕಡಿದ ಮರಕ್ಕಿಂತ ಹೆಚ್ಚು ಗಿಡಗಳನ್ನು ನೆಡಲಾಗಿದೆ ಎಂದು ಬುಧವಾರ ತಿಳಿಸಿದ್ದಾರೆ.
ಅಕ್ಟೋಬರ್ 17ರಂದು ಪುಣೆಯ ಸರ್ ಪರಶುರಾಮ್ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಮೋದಿ ರ್ಯಾಲಿಗಾಗಿ ಸೋಮವಾರದಂದು ಕೆಲವೊಂದು ಮರಗಳನ್ನು ಕಡಿಯಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ ಹಿನ್ನೆಲೆಯಲ್ಲಿ ಜಾವಡೆಕರ್ ಈ ಸಮರ್ಥನೆ ನೀಡಿದ್ದಾರೆ. “ಪ್ರತಿ ಬಾರಿ ಮರ ಕಡಿದಾಗಲೂ ನಾವು ಹೆಚ್ಚು ಗಿಡಗಳನ್ನು ನೆಡುತ್ತೇವೆ. ಇದು ಅರಣ್ಯ ಇಲಾಖೆಯ ಕಾನೂನಾಗಿದೆ” ಎಂದು ಜಾವಡೆಕರ್ ತಿಳಿಸಿದ್ದಾರೆ. “ಮೋದಿ ರ್ಯಾಲಿಗಾಗಿ ಮರ ಕಡಿಯುವ ಬಗ್ಗೆ ಇಷ್ಟೊಂದು ವಿವಾದವೆಬ್ಬಿಸಿರುವುದಾದರೂ ಯಾಕೆ? ಈ ಹಿಂದೆಯೂ ಹಲವರ ರ್ಯಾಲಿಗಳಿಗೆ ಮರ ಕಡಿಯಲಾಗಿದೆ. ಹಿಂದಿನ ಪ್ರಧಾನಿಗಳ ರ್ಯಾಲಿಗಳಿಗೂ ಮರ ಕಡಿಯಲಾಗಿದೆ. ಆಗ ಇಂತಹ ಜಾಗೃತಿ ಯಾಕಿರಲಿಲ್ಲ” ಎಂದು ನನಗೆ ಆಶ್ಚರ್ಯವಾಗುತ್ತದೆ ಎಂದು ಜಾವಡೆಕರ್ ಪ್ರಶ್ನಿಸಿದ್ದಾರೆ.