ಮಂಗಳೂರು: ಆಸ್ತಿ ವಿಚಾರದಲ್ಲಿ ಗಲಾಟೆ; ಸಹೋದರ ಹತ್ಯೆ
ಆರೋಪಿ ಸೆರೆ
ಮಂಗಳೂರು: ಆಸ್ತಿಯ ವಿಚಾರಕ್ಕೆ ಅಣ್ಣತಮ್ಮಂದಿರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ಬೆಂಗ್ರೆಯ ಕಸಬಾ ಬೆಂಗ್ರೆ ಸಮೀಪ ಗುರುವಾರ ತಡರಾತ್ರಿ ನಡೆದಿದೆ.
ಬೆಂಗ್ರೆ ನಿವಾಸಿ ಮುಸ್ತಾಪ ಕೊಲೆಯಾದ ವ್ಯಕ್ತಿ. ಮುಸ್ತಫಾರ ಸಹೋದರ ಅಬ್ದುಲ್ ರಹ್ಮಾನ್ ಕೊಲೆ ಆರೋಪಿ ಎಂದು ತಿಳಿದುಬಂದಿದೆ.
ಆಸ್ತಿ ಮತ್ತು ಮನೆ ವಿಚಾರಕ್ಕೆ ಇವರ ನಡುವೆ ಗಲಾಟೆ ನಡೆಯುತ್ತಿತ್ತು. ಅಲ್ಲದೆ, ತಾಯಿ ಹಾಗೂ ತಂಗಿಗೆ ಮನೆಯ ವಿಚಾರದಲ್ಲಿ ಅಬ್ದುಲ್ ರಹ್ಮಾನ್ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ನಿನ್ನೆ ತಡರಾತ್ರಿ ಮತ್ತೆ ಮನೆಯ ವಿಚಾರಕ್ಕೆ ಗಲಾಟೆ ನಡೆದಿದೆ. ಈ ಸಂದರ್ಭ ತಾಯಿ ಹಾಗೂ ಬಾವ ಗಲಾಟೆ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿ ಅಬ್ದುಲ್ ರಹ್ಮಾನ್ ಚೂರಿಯಿಂದ ಮುಸ್ತಾಫರಿಗೆ ಇರಿದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಮುಸ್ತಾಫರನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶುಕ್ರವಾರ ನಸುಕಿನ ಜಾವ ಸುಮಾರು 2:30ರ ವೇಳೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪಣಂಬೂರು ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.