ಅಸ್ಸಾಂ ಎನ್ಆರ್ಸಿ ಮುಖ್ಯಸ್ಥ ಪ್ರತೀಕ್ರನ್ನು ತಕ್ಷಣವೇ ವರ್ಗಾಯಿಸಿ: ಸುಪ್ರೀಂಕೋರ್ಟ್ ಆದೇಶ
ಹೊಸದಿಲ್ಲಿ, ಅ.18: ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ)ಪ್ರಕ್ರಿಯೆ ನಡೆಸುವಲ್ಲಿ ಮುಂಚೂಣಿಯಲ್ಲಿದ್ದ ಪ್ರತೀಕ್ ಹಜೇಲಾರನ್ನು ತಕ್ಷಣವೇ ಮಧ್ಯಪ್ರದೇಶಕ್ಕೆ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ.
ಎನ್ಆರ್ಸಿಯ ಸಂಯೋಜಕರಾಗಿದ್ದ ಹಜೇಲಾ ಗರಿಷ್ಠ ಅವಧಿಯ ತನಕ ಪ್ರತಿ ನಿಯುಕ್ತರಾಗಿರುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿದ್ದ ಪೀಠ ತಿಳಿಸಿದೆ. ಹಜೇಲಾರನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಸರಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.
‘‘ಈ ಆದೇಶಕ್ಕೆ ಕಾರಣವಿದೆಯೇ? ಎಂದು ಸರಕಾರಿ ವಕೀಲ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ನ್ಯಾಯಾಧೀಶರಲ್ಲಿ ಕೇಳಿದರು. ಕಾರಣವಿಲ್ಲದೆ ಯಾವುದೇ ಆದೇಶ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಉತ್ತರಿಸಿದರು.
ಆದೇಶಕ್ಕೆ ಕಾರಣ ನೀಡದೇ ಇರುವ ಕಾರಣ ಅಸ್ಸಾಂನಲ್ಲಿ ಈ ಬೆಳವಣಿಗೆ ಅಚ್ಚರಿ ತಂದಿದೆ.
1995ರ ಬ್ಯಾಚಿನ ಅಸ್ಸಾಂ-ಮೇಘಾಲಯ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ 48ರ ಹರೆಯದ ಹಜೇಲಾ ಅಸ್ಸಾಂನ ಪೌರತ್ವ ಪಟ್ಟಿಯ ಭಾರೀ ಪರಿಷ್ಕೃರಣೆಯ ಮೇಲ್ವಿಚಾರಣೆ ನಡೆಸಿದ್ದರು.
ಕಳೆದ ತಿಂಗಳು ಮುಸ್ಲಿಂ ಸಂಘಟನೆಯೊಂದು ಹಜೇಲಾ ವಿರುದ್ಧ ದೂರು ದಾಖಲಿಸಿದ್ದು, ಪಕ್ಷಪಾತದಿಂದ ವರ್ತಿಸಿರುವ ಪ್ರತೀಕ್ ಹಜೇಲಾ ನಿಜವಾದ ಭಾರತೀಯರ ನಾಗರಿಕರನ್ನು ಎನ್ಆರ್ಸಿ ಪಟ್ಟಿಯಿಂದ ಹೊರಗಿಟ್ಟಿದ್ದಾರೆ ಎಂದು ಆರೋಪಿಸಿತ್ತು.