ಸ್ವಘೋಷಿತ ದೇವಮಾನವ ‘ಕಲ್ಕಿ ಭಗವಾನ್’ ಆಶ್ರಮದ ಮೇಲೆ ಐಟಿ ದಾಳಿ: 409 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ
ಬೆಂಗಳೂರು, ಅ.18: ತಾನು ವಿಷ್ಣುವಿನ 10ನೇ ಅವತಾರ ಎಂದು ಹೇಳಿಕೊಳ್ಳುತ್ತಿರುವ ಸ್ವಘೋಷಿತ ದೇವಮಾನವ ‘ಕಲ್ಕಿ ಭಗವಾನ್’ ಆಶ್ರಮದ ಮೇಲೆ ನಡೆಸಿದ ದಾಳಿಯಲ್ಲಿ 93 ಕೋಟಿ ರೂ. ನಗದು ಸೇರಿದಂತೆ 409 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಬುಧವಾರ ಆರಂಭವಾಗಿರುವ ದಾಳಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದ. ಆಂಧ್ರಪ್ರದೇಶ, ತಮಿಳುನಾಡು ರಾಜ್ಯ ಸೇರಿದಂತೆ ‘ಕಲ್ಕಿ ಭಗವಾನ್’ ಹಾಗೂ ಪುತ್ರ ಕೃಷ್ಣನ ಒಡೆತನದಲ್ಲಿರುವ 40 ಕಟ್ಟಡಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಚೆನ್ನೈ, ಹೈದರಾಬಾದ್, ಬೆಂಗಳೂರು, ತಮಿಳುನಾಡಿನ ಗಡಿಯಲ್ಲಿರುವ ಚಿಟ್ಟೂರುಗಳಲ್ಲಿರುವ ಆಶ್ರಮದ ಮೇಲೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆಧ್ಯಾತ್ಮಿಕ ಗುರು ಎಂದು ಕರೆಸಿಕೊಳ್ಳುವ ಕಲ್ಕಿ ಭಗವಾನ್ ಭಾರತದ ಜೊತೆಗೆ ವಿದೇಶದಲ್ಲೂ ರಿಯಲ್ ಎಸ್ಟೇಟ್, ನಿರ್ಮಾಣ, ಕ್ರೀಡಾಕ್ಷೇತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಪ್ರತಿಷ್ಠಾನ ಮತ್ತು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಈ ಪ್ರತಿಷ್ಠಾನ ಮತ್ತು ಸಂಸ್ಥೆಗಳ ಒಕ್ಕೂಟ ವರ್ಷವಿಡೀ ವಸತಿ ಸಮುಚ್ಛಯಗಳಲ್ಲಿ ಜೀವನಕ್ರಮ, ಆಧ್ಯಾತ್ಮಿಕತೆ ಮತ್ತಿತರ ವಿಷಯಗಳಲ್ಲಿ ತರಬೇತಿ ಮತ್ತು ಶಿಬಿರಗಳನ್ನು ಹಮ್ಮಿಕೊಳ್ಳುತ್ತದೆ. ಇದಕ್ಕೆ ವಿದೇಶದಿಂದಲೂ ಜನರು ಬರುತ್ತಿದ್ದಾರೆ.
ಸಂಸ್ಥೆ ತನ್ನ ಆದಾಯವನ್ನು ಮರೆಮಾಚಿ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಆಸ್ತಿ ಖರೀದಿಸಿದೆ ಮತ್ತು ವಿದೇಶದಲ್ಲೂ ಹೂಡಿಕೆ ಮಾಡಿದೆ ಎಂಬ ಗುಪ್ತಚರ ವಿಭಾಗದ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿವೆ. ಆಶ್ರಮಕ್ಕೆ ನೀಡಲಾಗುವ ದೇಣಿಗೆಗೆ ರಶೀದಿ ನೀಡುವುದಿಲ್ಲ. ಅಲ್ಲದೆ ಅನುಯಾಯಿಗಳು ನೀಡುವ ಹಣವನ್ನು ಲೆಕ್ಕಪುಸ್ತಕದಲ್ಲಿ ಉಲ್ಲೇಖಿಸುವುದಿಲ್ಲ. ಆಸ್ತಿಗಳನ್ನು ದಾಖಲಿತ ಮೌಲ್ಯಕ್ಕಿಂತ ಅಧಿಕ ದರದಲ್ಲಿ ಮಾರಿ ಕಪ್ಪುಹಣ ಸಂಗ್ರಹಿಸಲಾಗುತ್ತಿದೆ. ಆಶ್ರಮದಲ್ಲಿ 43 ಕೋಟಿ ರೂ. ನಗದಿನ ಜೊತೆಗೆ ಭಾರೀ ಪ್ರಮಾಣದ ವಿದೇಶಿ ಕರೆನ್ಸಿಯನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಇಲಾಖೆ ತಿಳಿಸಿದೆ.
ಸುಮಾರು 18 ಕೋಟಿ ರೂ. ಮೊತ್ತದ ಅಮೆರಿಕನ್ ಡಾಲರ್ ವಶಕ್ಕೆ ಪಡೆಯಲಾಗಿದೆ. ಲೆಕ್ಕಪತ್ರದಲ್ಲಿ ತೋರಿಸದ 88 ಕಿ.ಗ್ರಾಂ ಚಿನ್ನದ ಆಭರಣಗಳು(26 ಕೋಟಿ ರೂ.ಮೌಲ್ಯ), 5 ಕೋಟಿ ರೂ. ಮೌಲ್ಯದ ವಜ್ರಾಭರಣ ಸೇರಿದ್ದು ಅಕ್ರಮ ಆಸ್ತಿಗಳ ವೌಲ್ಯ ಸುಮಾರು 500 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಎಲ್ಐಸಿಯಲ್ಲಿ ಓರ್ವ ಸಾಮಾನ್ಯ ಕ್ಲರ್ಕ್ ಆಗಿದ್ದ ವಿಜಯ್ ಕುಮಾರ್ 1980ರ ಮಧ್ಯಭಾಗದಲ್ಲಿ ಜೀವನಾಶ್ರಮ ಶಾಲೆ ಎಂಬ ಸಂಸ್ಥೆಯನ್ನು ಆರಂಭಿಸಿದ್ದ. ಬಳಿಕ ಚಿಟ್ಟೂರು ಕ್ಯಾಂಪಸ್ನಲ್ಲಿ ಏಕತೆಯ ವಿವಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದನ್ನು ಬೆಳೆಸಿದ್ದ.
1990ರಲ್ಲಿ ತನ್ನನ್ನು ‘ಕಲ್ಕಿ’ ಎಂದು ಕರೆಸಿಕೊಂಡ ವಿಜಯ್ ಕುಮಾರ್, ತಾನು ವಿಷ್ಣುವಿನ ದಶಾವತಾರ ಎಂದು ಘೋಷಿಸಿಕೊಂಡ. ಈತನ ಪತ್ನಿ ಪದ್ಮಾವತಿ ಮತ್ತು ಮಗ ಕೃಷ್ಣ ತಂದೆ ಕಟ್ಟಿ ಬೆಳೆಸಿದ ಹಲವು ಆಶ್ರಮ, ಸಂಸ್ಥೆಗಳ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ.