ಕವಿ ಇಕ್ಬಾಲ್ ಹಾಡನ್ನು ಹಾಡಿಸಿದ್ದಕ್ಕೆ ಅಮಾನತುಗೊಂಡ ಶಿಕ್ಷಕನನ್ನು ಬೆಂಬಲಿಸಿ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು
Photo: indianexpress.com
ಹೊಸದಿಲ್ಲಿ, ಅ.19: "ಸಾರೇ ಜಹಾನ್ ಸೆ ಅಚ್ಛಾ'' ಹಾಡನ್ನು ಬರೆದ ಉರ್ದು ಕವಿ ಮುಹಮ್ಮದ್ ಇಕ್ಬಾಲ್ ಅವರ ಇನ್ನೊಂದು ಉರ್ದು ಕವಿತೆ 'ಲಬ್ ಪೆ ಆತೀ ಹೈ ದುಆ' (ಬಚ್ಛೇ ಕಿ ದುವಾ) ಹಾಡನ್ನು ವಿದ್ಯಾರ್ಥಿಗಳಿಂದ ಹಾಡಿಸಿದ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಪಿಲ್ಹಿಬಿಟ್ ನ ಘಯಾಸ್ಪುರ್ ಎಂಬಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಈ ಹಾಡನ್ನು ಹಾಡಿಸುತ್ತಿದ್ದಾರೆ ಎಂದು ವಿಶ್ವ ಹಿಂದು ಪರಿಷದ್ ಕಾರ್ಯಕರ್ತರು ಆರೋಪ ಹೊರಿಸಿದ ನಂತರ ಮುಖ್ಯೋಪಾಧ್ಯಾಯ ಫುರ್ಖಾನ್ ಅಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಈ ನಿರ್ಧಾರವನ್ನು ವಿರೋಧಿಸಿ ಶಾಲೆಯ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದಾರಲ್ಲದೆ ಮುಖ್ಯೋಪಾಧ್ಯಾಯರನ್ನು ಮರಳಿ ಶಾಲೆಗೆ ಕರೆಸುವ ತನಕ ತಾವು ಪ್ರತಿಭಟಿಸುವುದಾಗಿ ಹೇಳಿದ್ದಾರೆ.
ತರಗತಿಗಳನ್ನು ಬಹಿಷ್ಕರಿಸಿದ ಸುಮಾರು 30 ವಿದ್ಯಾರ್ಥಿಗಳು "ದೇಶ್ ಕಿ ರಕ್ಷಾ ಕೌನ್ ಕರೇಗಾ? ಹಮ್ ಕರೇಂಗ,'' "ಕೈಸೇ ಕರೇಂಗೆ, ತನ್ ಸೇ ಕರೇಂಗೆ, ಮನ್ ಸೇ ಕರೇಂಗೆ ಧನ್ ಸೇ ಕರೇಂಗೆ'' ಎಂಬ ಘೋಷಣೆಗಳನ್ನೂ ಕೂಗಿದರು.
"ನಮ್ಮ ಹೆಡ್ ಮಾಸ್ಟರ್ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ, ಅವರ ವಿರುದ್ಧದ ಕ್ರಮ ತಪ್ಪು, ಅನ್ಯಾಯ, ಅವರು ಶಾಲೆಗೆ ಮರಳಿ ಬಂದ ದಿನವೇ ನಾವು ತರಗತಿಗೆ ವಾಪಸಾಗುತ್ತೇವೆ'' ಎಂದು ವಿದ್ಯಾರ್ಥಿಗಳು ಹೇಳಿದರು.