"ಅರ್ಥವ್ಯವಸ್ಥೆ ಸುಧಾರಿಸುವುದು ನಿಮ್ಮ ಕೆಲಸ, ಕಾಮಿಡಿ ಸರ್ಕಸ್ ನಡೆಸುವುದಲ್ಲ"
ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಹೊಸದಿಲ್ಲಿ, ಅ.19: ‘ನೊಬೆಲ್’ ಪುರಸ್ಕೃತ ಅಭಿಜಿತ್ ಬ್ಯಾನರ್ಜಿಯವರ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪಾತಾಳಕ್ಕೆ ಕುಸಿಯುತ್ತಿರುವ ಅರ್ಥವ್ಯವಸ್ಥೆಯನ್ನು ಸುಧಾರಿಸುವುದು ಸರಕಾರದ ಕೆಲಸವಾಗಿದೆ, ಕಾಮಿಡಿ ಸರ್ಕಸ್ ನಡೆಸುವುದಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪುಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಗೋಯಲ್, ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಎಡಪಂಥೀಯ ಒಲವಿನವರಾಗಿದ್ದಾರೆ. ಅವರ ಆರ್ಥಿಕ ಚಿಂತನೆಗಳನ್ನು ಭಾರತ ತಿರಸ್ಕರಿಸಿದೆ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ಬಿಜೆಪಿಯವರು ತಮ್ಮ ಕೆಲಸ ಮಾಡುವ ಬದಲು ಇತರರ ಸಾಧನೆಯನ್ನು ಹುಸಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬ್ಯಾನರ್ಜಿಯವರ ಪ್ರಾಮಾಣಿಕ ಸಾಧನೆಯನ್ನು ಗುರುತಿಸಿ ನೊಬೆಲ್ ಪುರಸ್ಕಾರ ನೀಡಲಾಗಿದೆ. ಅವರನ್ನು ಅಭಿನಂದಿಸಬೇಕು ಎಂದು ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಅರ್ಥವ್ಯವಸ್ಥೆ ಕುಸಿಯುತ್ತಿದೆ. ಅದನ್ನು ಸುಧಾರಿಸುವುದು ನಿಮ್ಮ ಕೆಲಸ. ಕಾಮಿಡಿ ಸರ್ಕಸ್ ಕಂಪೆನಿಯಂತೆ ಕೆಲಸ ಮಾಡುವುದಲ್ಲ ಎಂದು ಟೀಕಿಸಿದ್ದಾರೆ.