ಕನ್ನಡ ನಾಮಫಲಕ ಕಡ್ಡಾಯ: ನ.1ರೊಳಗೆ ಆದೇಶ ಪಾಲಿಸದಿದ್ದಲ್ಲಿ ಪರವಾನಿಗೆ ರದ್ದು
![ಕನ್ನಡ ನಾಮಫಲಕ ಕಡ್ಡಾಯ: ನ.1ರೊಳಗೆ ಆದೇಶ ಪಾಲಿಸದಿದ್ದಲ್ಲಿ ಪರವಾನಿಗೆ ರದ್ದು ಕನ್ನಡ ನಾಮಫಲಕ ಕಡ್ಡಾಯ: ನ.1ರೊಳಗೆ ಆದೇಶ ಪಾಲಿಸದಿದ್ದಲ್ಲಿ ಪರವಾನಿಗೆ ರದ್ದು](https://www.varthabharati.in/sites/default/files/images/articles/2019/10/19/215566-1571506555.jpg)
ಬೆಂಗಳೂರು, ಅ.19: ನವೆಂಬರ್ 1ರೊಳಗೆ ಅಂಗಡಿ-ಮುಂಗಟ್ಟು, ಹೊಟೇಲ್ ಹಾಗೂ ಕಂಪನಿಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿಯಿಂದ ಪರವಾನಿಗೆ ಪಡೆದಿರುವ ಅಂಗಡಿ, ಮುಂಗಟ್ಟುಗಳು, ಹೊಟೇಲ್ಗಳು, ಕಂಪನಿಗಳು ಹಾಗೂ ಇತರೆ ವ್ಯಾಪಾರಿಗಳು ತಮ್ಮ ಮಳಿಗೆಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು. ನಾಮಫಲಕದಲ್ಲಿ ಕನಿಷ್ಠ ಶೇ.60ರಷ್ಟು ಕನ್ನಡ ಭಾಷೆಯಲ್ಲಿರುವಂತೆ ಅಂದರೆ ಸ್ಪಷ್ಟವಾಗಿ ಕಾಣುವಂತೆ ಕನ್ನಡ ಪದಗಳ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ. ಆದೇಶ ಪಾಲಿಸದಿದ್ದಲ್ಲಿ ಅಂಗಡಿಯ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಕನ್ನಡೀಕರಣಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಲವು ನಿರ್ದೇಶನಗಳನ್ನು ನೀಡಿತ್ತು. ಅದರಂತೆ ಪ್ರಾಧಿಕಾರ ಸೂಚಿಸಿರುವ ಅಂಶಗಳನ್ನು ಬಿಬಿಎಂಪಿ ಅನುಷ್ಠಾನಕ್ಕೆ ತರುತ್ತಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಕನ್ನಡೀಕರಣಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಲವು ನಿರ್ದೇಶನಗಳನ್ನು ನೀಡಿತ್ತು. ಅದರಂತೆ ಪ್ರಾಧಿಕಾರ ಸೂಚಿಸಿರುವ ಅಂಶಗಳನ್ನು ಬಿಬಿಎಂಪಿ ಅನುಷ್ಠಾನಕ್ಕೆ ತರುತ್ತಿದೆ ಎಂದು ತಿಳಿಸಿದ್ದಾರೆ.
ನ.1ರೊಳಗೆ ಅನುಷ್ಠಾನಕ್ಕೆ ಹೊಸದಾಗಿ ಟ್ರೇಡ್ ಲೈಸೆನ್ಸ್ ನೀಡುವ ಮುನ್ನ ಅಂಗಡಿಗಳ ನಾಮಫಲಕದಲ್ಲಿ ಕನ್ನಡ ಬಳಕೆ ಮಾಡಿದ್ದರೆ ಮಾತ್ರ ಪರವಾನಿಗೆ ನೀಡುವ ಸಂಬಂಧ ಆಯುಕ್ತರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ನ.1ರೊಳಗೆ ಇದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ.
-ಗೌತಮ್ ಕುಮಾರ್ ಜೈನ್, ಬಿಬಿಎಂಪಿ ಮೇಯರ್