ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ಶಿಬಿರಗಳ ಮೇಲೆ ಭಾರತೀಯ ಸೇನೆಯ ದಾಳಿ
ನಾಲ್ವರು ಪಾಕ್ ಸೈನಿಕರು ಹತ
ಶ್ರೀನಗರ, ಅ. 20: ಭಾರತದ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಓಕೆ)ದ ಒಳಗಿರುವ ಭಯೋತ್ಪಾದಕ ಶಿಬಿರಗಳ ಮೇಲೆ ರವಿವಾರ ದಾಳಿ ನಡೆಸಿದ ಪರಿಣಾಮ ಪಾಕಿಸ್ತಾನ ಸೇನೆಯ ಕನಿಷ್ಠ ನಾಲ್ಕರಿಂದ ಐದು ಯೋಧರು ಹತರಾಗಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.
ಕುಪ್ವಾರದ ತಂಗದಾರ್ ವಲಯದ ವಿರುದ್ಧ ದಿಕ್ಕಿನಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರದ ಒಳಗಿನ ನೀಲಂ ಕಣಿವೆಯಲ್ಲಿದ್ದ ನಾಲ್ಕು ಭಯೋತ್ಪಾದಕ ಶಿಬಿರಗಳನ್ನು ಸೇನೆ ಫಿರಂಗಿ ದಾಳಿ ನಡೆಸಿ ಧ್ವಂಸಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಗಡಿಯ ಒಳಗೆ ನುಸುಳಿಸಲು ಭಯೋತ್ಪಾದಕರನ್ನು ಸಿದ್ಧಗೊಳಿಸುತ್ತಿರುವ ಭಯೋತ್ಪಾದಕರ ಶಿಬಿರಗಳನ್ನು ಗುರಿಯಾಗಿರಿಸಿ ಭಾರತೀಯ ಸೇನೆ ಫಿರಂಗಿ ದಾಳಿ ನಡೆಸಿತು.
ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿ ಪಾಕ್ ಸೇನೆ ಶನಿವಾರ ರಾತ್ರಿ ಫಿರಂಗಿ ದಾಳಿ ನಡೆಸಿದ ಬಳಿಕ ರವಿವಾರ ಭಾರತೀಯ ಸೇನೆ ಭಯೋತ್ಪಾದಕರು ಗಡಿ ನುಸುಳಲು ನೆರವು ನೀಡುವ ಸೇನಾ ಠಾಣೆಗಳು ಹಾಗೂ ಭಯೋತ್ಪಾದಕ ಶಿಬಿರಗಳನ್ನು ಗುರುತಿಸಿ ಧ್ವಂಸಗೊಳಿಸಿತು ಎಂದು ಸೇನಾ ಮೂಲಗಳು ತಿಳಿಸಿವೆ.
ಜಮ್ಮು ಹಾಗೂ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗಧಾರ್ ವಲಯದಲ್ಲಿ ಪಾಕಿಸ್ತಾನ ಪಡೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಓರ್ವ ನಾಗರಿಕ ಹತನಾಗಿದ್ದ.
ಭಾರತದ ಗಡಿಯಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಸೇನೆ ನೆರವು ನೀಡಿದಲ್ಲಿ ಭಾರತೀಯ ಸೇನೆ ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ಸ್ಥಳದಲ್ಲಿ ಪ್ರತಿಕ್ರಿಯೆ ನೀಡಲಿದೆ ಎಂದು ಸೇನೆ ಎಚ್ಚರಿಸಿದೆ.