‘ನ್ಯಾಯ’ ಯೋಜನೆಯ ಅಂಕಿಅಂಶದ ಮಾಹಿತಿ ಮಾತ್ರ ನೀಡಿದ್ದೇನೆ: ಅಭಿಜಿತ್ ಬ್ಯಾನರ್ಜಿ
ಹೊಸದಿಲ್ಲಿ, ಅ.20: ಕಳೆದ (2019ರ) ಸಾರ್ವತ್ರಿಕ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷದ ಪರಿಕಲ್ಪನೆ ‘ನ್ಯಾಯ’ ಯೋಜನೆಗೆ ಸಂಬಂಧಿಸಿ ಕೆಲವು ಅಂಕಿಅಂಶದ ಮಾಹಿತಿ ಮಾತ್ರ ತಾನು ಒದಗಿಸಿದ್ದೇನೆ ಎಂದು ನೋಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.
‘ನ್ಯಾಯ’ ಯೋಜನೆಯನ್ನು ಜಾರಿಗೊಳಿಸುವ ಜವಾಬ್ದಾರಿ ಕೇಂದ್ರ ಸರಕಾರದ್ದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಕೆಲವು ಅಂಕಿಅಂಶ ಮಾಹಿತಿಯನ್ನು ನೀಡಿದ್ದೇನೆ ಅಷ್ಟೇ ಎಂದು ಬ್ಯಾನರ್ಜಿ ಹೇಳಿದ್ದಾರೆ. ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ‘ನ್ಯಾಯ’ ಯೋಜನೆಯಡಿ ದೇಶದ ಪ್ರತೀ ಬಡವರಿಗೆ ವರ್ಷಕ್ಕೆ 72000 ರೂ. ಹಣ ನೀಡುವ ಭರವಸೆ ನೀಡಲಾಗಿತ್ತು.
ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಎಡಪಂಥೀಯ ಒಲವಿನವರಾಗಿದ್ದಾರೆ. ದೇಶದ ಜನತೆ ‘ನ್ಯಾಯ’ ಯೋಜನೆ ಸೇರಿದಂತೆ ಅವರ ಆರ್ಥಿಕ ಚಿಂತನೆಗಳನ್ನು ತಿರಸ್ಕರಿಸಿದೆ ಎಂಬ ಬಿಜೆಪಿ ಪಕ್ಷದ ಟೀಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಧನ, ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಉಜ್ವಲ ಯೋಜನೆಗಳನ್ನು ಸ್ವಾಗತಿಸಿರುವ ಅವರು, ಇವು ದೀರ್ಘಾವಧಿಯ ಉತ್ತಮ ಪರಿಕಲ್ಪನೆಗಳಾಗಿವೆ ಎಂದಿದ್ದಾರೆ.