ಸಾವರ್ಕರ್ ವಿರುದ್ಧ ಮಾತನಾಡುವ ಸಿದ್ದರಾಮಯ್ಯರಿಗೆ ತಲೆ ಸರಿಯಿಲ್ಲ: ಸಚಿವ ಆರ್.ಅಶೋಕ್
ಬಂಟ್ವಾಳ, ಅ.21: "ವೀರ ಸಾವರ್ಕರ್ ಅವರ ವಿರುದ್ಧ ಮಾತನಾಡುವ ಸಿದ್ದರಾಮಯ್ಯ ಅವರಿಗೆ ತಲೆ ಸರಿಯಲ್ಲ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಅವರು ಸೋಮವಾರ ಬಿ.ಸಿ.ರೋಡ್ ನಗರ ಸೌಂದರ್ಯದ ಬಗ್ಗೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಯೋಜನಾ ವರದಿಯ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
"ಸ್ವಾತಂತ್ರ್ಯ ಹೋರಾಟ ಮಾಡಿದ ವೀರ ಸಾರ್ವಕರ್ ವಿರುದ್ಧ ಮಾತನಾಡುವ ಸಿದ್ದರಾಮಯ್ಯ ಅವರ ನಾಲಗೆ ಮೇಲೆ ಹಿಡಿತವಿರಲಿ. ಸಿದ್ದರಾಮಯ್ಯ ಒಂದು ದಿನ ಅಂಡಮಾನ್ ಜೈಲಿನಲ್ಲಿ ಇದ್ದು ನೋಡಲಿ" ಎಂದು ಸವಾಲೆಸೆದರು.
ಸಾವರ್ಕರ್ರ ಪತ್ರ ವ್ಯವಹಾರ ಏನೇ ಇರಬಹುದು. ಟಿಪ್ಪು ಸುಲ್ತಾನ್ ಕೂಡಾ ಬ್ರಿಟೀಷರ ಜೊತೆ ಪತ್ರ ವ್ಯವಹಾರ ಮಾಡಿದ್ದಾನೆ. ಟಿಪ್ಪು ಸುಲ್ತಾನ್ ವಿವಾದಿತ ವ್ಯಕ್ತಿ. ಟಿಪ್ಪು ಸುಲ್ತಾನ್ ತನ್ನ ಸ್ವಾರ್ಥಕ್ಕೋಸ್ಕರ ಮಕ್ಕಳನ್ನೆ ಅಡವಿಟ್ಟಿದ್ದ. ಆತ ಬ್ರಿಟಷರ ಜೊತೆ ಶಾಮಿಲಾಗಿರುವ ಬಗ್ಗೆ ಹಲವಾರು ದಾಖಲೆಗಳಿವೆ. ಅವನು ಅವನ ರಾಜ್ಯ ಉಳಿಸಿಕೊಳ್ಳೊಕೆ ಹೋರಾಡಿದ್ದಾನೆ ಹೊರತು ಸ್ವಾತಂತ್ರ್ಯಕ್ಕಾಗಿ ಅಲ್ಲ, ನಿಜವಾದ ಸ್ವಾತಂತ್ರ್ಯ ಹೋರಾಟಗಾಗರಿಗೆ ಈ ದೇಶ ಗೌರವವನ್ನು ಕೊಡಬೇಕು. ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುವ ಸಿದ್ದರಾಮಯ್ಯರಿಗೆ ಇದು ಶೋಭೆ ತರದು. ಮುಂದಿ ಇಂತಹ ಹೇಳಿಕೆಗಳನ್ನು ನೀಡುದನ್ನು ನಿಲ್ಲಿಸಲಿ. ಸ್ವಾತಂತ್ರ್ಯ ಹೋರಾಟ ಮಾಡಿದವರ ಬಗ್ಗೆ ಮಾತನಾಡುವವರಿಗೆ ಜನರೇ ಬಹಿಷ್ಕಾರ ಹಾಕಬೇಕು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಸಂಜೀವ ಮಠಂದೂರು ಉಪಸ್ಥಿತರಿದ್ದರು.