ಕಾರ್ಕಳ: ಮನೆಗೆ ನುಗ್ಗಿ ಸೊತ್ತು ಕಳವು
ಕಾರ್ಕಳ, ಅ. 22: ಕುಕ್ಕುಂದೂರು ಸಮೀಪದ ಜಲದುರ್ಗಾ ನಗರ ಎಂಬಲ್ಲಿ ಅ.21ರಂದು ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಗುರುಪ್ರಸಾದ್ ಭಟ್ ಎಂಬವರ ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಕಿಟಕಿ ಮೂಲಕ ತೆಗೆದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿರಿಸಿದ್ದ ಒಂದು ಜೊತೆ ಚಿನ್ನದ ಬೆಂಡೋಲೆ, ಕಿವಿಗೆ ಹಾಕುವ ಒಂದು ಚಿನ್ನದ ಕುಡ್ಪು, ಮೂಗುತಿ ಹಾಗೂ ಬೆಳ್ಳಿಯ ಪೂಜಾ ಸಾಮಗ್ರಿಗಳಾದ ಎರಡು ಹರಿವಾಣ, ತಂಬಿಗೆ, ಲೋಟ, ಕೌಳಿಗೆ, ಸೌಟು, ಎರಡು ಲಕ್ಷ್ಮೀ ದೀಪ, ಎರಡು ಬೆಳ್ಳಿ ದೀಪ, 5 ಅರಸಿನ ಕುಂಕುಮ ತಟ್ಟೆ ಹಾಗೂ ಬಟ್ಟಲು ಮತ್ತು ಸುಮಾರು 500 ನಾಣ್ಯಗಳನ್ನು ಕಳವುಗೈದಿದ್ದಾರೆ ಎನ್ನಲಾಗಿದೆ. ಇವುಗಳ ಒಟ್ಟು ಮೌಲ್ಯ 23,500 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story