ನಾಡಧ್ವಜ ವಿರುದ್ಧ ಸಂಸದ ಪ್ರಹ್ಲಾದ್ ಜೋಶಿ ಹೇಳಿಕೆಗೆ ಖಂಡನೆ
![ನಾಡಧ್ವಜ ವಿರುದ್ಧ ಸಂಸದ ಪ್ರಹ್ಲಾದ್ ಜೋಶಿ ಹೇಳಿಕೆಗೆ ಖಂಡನೆ ನಾಡಧ್ವಜ ವಿರುದ್ಧ ಸಂಸದ ಪ್ರಹ್ಲಾದ್ ಜೋಶಿ ಹೇಳಿಕೆಗೆ ಖಂಡನೆ](https://www.varthabharati.in/sites/default/files/images/articles/2019/10/23/216031-1571769624.jpg)
ಬೆಂಗಳೂರು ಅ.22: ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ನಾಡಧ್ವಜ ಹಾರಿಸುವ ಬದಲು ರಾಷ್ಟ್ರಧ್ವಜ ಹಾರಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆಯನ್ನು ನಾವೇ ಕರ್ನಾಟಕ ಸಂಘಟನೆ ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಪಾರ್ವತೀಶ ಬಿಳಿದಾಳೆ, ನಾಡಧ್ವಜ ಯಾವುದೇ ಕಾರಣಕ್ಕೂ ರಾಷ್ಟ್ರಧ್ವಜಕ್ಕೆ ಪ್ರತಿಸ್ಪರ್ಧಿಯಲ್ಲ ಹಾಗೂ ಕೀಳೂ ಅಲ್ಲ. ಆದರೆ ಬಿಜೆಪಿಯ ಕೆಲ ನಾಯಕರು ಕನ್ನಡದ ಅಸ್ಮಿತೆಯನ್ನು ನಿರಾಕರಿಸುವ, ಕರ್ನಾಟಕದ ಅನನ್ಯತೆಯನ್ನು ನಿರ್ಲಕ್ಷಿಸುವ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ. ಕೇಂದ್ರ ಸಚಿವರ ಹೇಳಿಕೆ ಕನ್ನಡದ ಬಗೆಗಿನ ನಿರ್ಲಕ್ಷ ಧೋರಣೆ ತೋರಿಸುತ್ತದೆ. ಅವರು ತಕ್ಷಣ ರಾಜ್ಯದ ಜನತೆ ಮುಂದೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು
ಕರ್ನಾಟಕದ ಬಹು ಸಂಖ್ಯಾತ ಜನತೆಯು ಪ್ರವಾಹ ಹಾಗೂ ಬರದಿಂದ ಬಾಧಿತರಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ನಿರ್ಲಕ್ಷಿಸಿವೆ. ಭಾರತದ ಆರ್ಥಿಕತೆಗೆ ರಾಜ್ಯದ ಕೊಡುಗೆ ಅಪಾರವಿದ್ದರೂ, ಕೇಂದ್ರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಕರ್ನಾಟಕದ ಜನತೆ ರಾಜ್ಯೋತ್ಸವವನ್ನು ಕೇಂದ್ರ ಸರಕಾರದ ದಬ್ಬಾಳಿಕೆ, ಹಿಂದಿ ಹೇರಿಕೆ, ತಾರತಮ್ಯ ನೀತಿಗಳ ವಿರುದ್ಧದ ಕಾರ್ಯಕ್ರಮವಾಗಿ ಆಚರಿಸಬೇಕಿದೆ. ಕನ್ನಡದ ವಿರುದ್ಧ ಹೇಳಿಕೆ ನೀಡುವ ಸಚಿವರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್ ರಾಜ್, ಕೆಥೋಲಿಕ್ ಕ್ರೈಸ್ತರ ಕನ್ನಡ ಬಳಗದ ಡಾ. ರೀಟಾ ರೀನಿ ಇದ್ದರು.